ದುಬೈ, ಜನವರಿ 11: ವಿಶ್ವವಿಖ್ಯಾತ ಇಸ್ಲಾಮಿಕ್ ಪ್ರವಚನಕಾರರಾದ ಡಾ. ಜಾಕಿರ್ ನಾಯಕ್ ರವರು ಇತ್ತೀಚೆಗೆ ದುಬೈ ನಗರಕ್ಕೆ ಆಗಮಿಸಿದ್ದರು. ತಮ್ಮ ಖಾಸಗಿ ಭೇಟಿಯ ವೇಳೆ ಅವರು ಪೀಸ್ ಟೀವಿ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಎಂ ಸೈಯದ್ ಖಲೀಲ್ ರವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟವೊಂದರ ಆಹ್ವಾನವನ್ನು ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಲೋಕಾರಾಭಿಮಾನವಾಗಿ ಮಾತನಾಡಿದ ಅವರು ಮುಂಬೈಯಲ್ಲಿ ಐಆರ್ ಎಫ್ (ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್) ಸಂಸ್ಥೆ ಇಬ್ಬರು ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ ಎಂಬ ನೂತನ ಕಲ್ಪನೆಯಡಿ ಹೊಸ ಶಿಕ್ಷಣವ್ಯವಸ್ಥೆಯನ್ನು ಹೊಂದುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು. ಇದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೇ ಪಾಲಕರೂ ಕಲವು ಕಟ್ಟುಪಾಡುಗಳಿಗೆ ಒಳಗಾಗುವುದು ಅನಿವಾರ್ಯವಾಗಿದೆ. ದಿನದ ಐದೂ ಹೊತ್ತಿನ ನಮಾಜ್, ವಾರದ ಮತ್ತು ತಿಂಗಳ ಪ್ರವಚನಗಳಿಗೆ ಕಡ್ಡಾಯ ಹಾಜರಿ, ತಾಯಿ ಕಡ್ಡಾಯವಾಗಿ ಹಿಜಾಬ್ ಧರಿಸುವುದು ಹಾಗೂ ಕೇಬಲ್ ಟೀವಿ ವೀಕ್ಷಣೆಯನ್ನು ತ್ಯಜಿಸುವುದು ಮೊದಲಾದವು ಈ ಕಟ್ಟುಪಾಡುಗಳಲ್ಲಿ ಕೆಲವು.
ಪೀಸ್ ಟೀವಿ ಬಗ್ಗೆ ಮಾತನಾಡಿದ ಅವರು ಪ್ರಸ್ತುತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಈ ಟೀವಿ ವಾಹಿನಿಯನ್ನು ಭವಿಷ್ಯದಲ್ಲಿ ಉರ್ದು, ಅರೇಬಿಕ್ ಹಾಗೂ ಆಂಗ್ಲಭಾಷೆಗಳಲ್ಲಿ ಪ್ರಸರಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸೈಯದ್ ಖಲೀಲುರ್ರಹಮಾನ್ ರವರು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಭಾರತದಲ್ಲಿ ಅಳವಡಿಸುವ ಬಗ್ಗೆ ಈಗಾಗಲೇ ಚರ್ಚೆಯಾಗಿದ್ದು ಶೀಘ್ರದಲ್ಲಿಯೇ ಪ್ರಧಾನಮಂತ್ರಿಗಳನ್ನು ನಿಯೋಗವೊಂದು ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ಈಗಾಗಲೇ ನೆರೆರಾಜ್ಯವಾದ ಕೇರ್ಅಳದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಬಗ್ಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇದು ರ್ಆಷ್ಟ್ರವ್ಯಾಪಿ ವ್ಯಾಪಿಸಬೇಕು ಎಂದು ಕರೆನೀಡಿದರು.


ಅತಿಥಿಯಾಗಿ ಆಗಮಿಸಿದ್ದ ಮಲಯಾಳಿ ಜಾಕಿರ್ ನಾಯಕ್ ಎಂಬ ಅನ್ವರ್ಥನಾಮ ಹೊಂದಿರುವ ಇನ್ನೋರ್ವ ವಿದ್ವಾಂಸ ಎಂ.ಎಂ. ಅಕ್ಬರ್ ರವರು ತಮ್ಮ ಸಾಧನೆಗಳನ್ನು ವಿವರಿಸಿ ದಾವಾ ಕ್ಷೇತ್ರದಲ್ಲಿ ತಾವು ಪಡೆಯಬಯಸುವ ಸಾಧನೆಯನ್ನು ವಿವರಿಸಿದರು.

ಕೇವಲ ಕೆಲವೇ ಗಣ್ಯರಿಗೆ ಆಹ್ವಾನ ನೀಡಿಲಾಗಿದ್ದ ಭೋಜನಕೂಟ ಸರಳರೀತಿಯಲ್ಲಿ ಕೊನೆಗೊಂಡಿತು.
ಚಿತ್ರ, ವರದಿ: ಸಾಹಿಲ್ ಪ್ರತಿನಿಧಿ, ದುಬೈ.