ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರೂರು ಗುಡ್ಡ ಕುಸಿತ; ಗಂಗಾವಳಿ ನದಿಯಲ್ಲಿ ಟ್ರಕ್ಕೊಂದು ಮುಳುಗಿರುವುದನ್ನಖಚಿತ ಪಡಿಸಿದ ರಾಜ್ಯ ಸರ್ಕಾರ

ಶಿರೂರು ಗುಡ್ಡ ಕುಸಿತ; ಗಂಗಾವಳಿ ನದಿಯಲ್ಲಿ ಟ್ರಕ್ಕೊಂದು ಮುಳುಗಿರುವುದನ್ನಖಚಿತ ಪಡಿಸಿದ ರಾಜ್ಯ ಸರ್ಕಾರ

Wed, 24 Jul 2024 23:51:37  Office Staff   SOnews

ಬೆಂಗಳೂರು: ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ತಮ್ಮ ಟ್ರಕ್‌ನೊಂದಿಗೆ ನಾಪತ್ತೆಯಾಗಿದ್ದ ಕೊಝಿಕ್ಕೋಡ್‌ ನಿವಾಸಿ ಅರ್ಜುನ್‌ ಅವರಿಗಾಗಿ ಶೋಧ ಮುಂದುವರಿದಿರುವ ನಡುವೆ ಟ್ರಕ್ಕೊಂದು ಗಂಗಾವಳಿ ನದಿಯಲ್ಲಿ ಮುಳುಗಿರುವುದು ಖಚಿತವಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೇಳಿದೆ.  

“ಒಂದು ಟ್ರಕ್‌ ನೀರಿನಲ್ಲಿ ಮುಳುಗಿರುವುದು ಖಚಿತವಾಗಿದೆ ಹಾಗೂ ನೌಕಾಪಡೆಯ ಮುಳುಗು ತಜ್ಞರು ಅದನ್ನು ಮೇಲಕ್ಕೆ ತರಲಿದ್ದಾರೆ. ಲಾಂಗ್‌ ಆರ್ಮ್‌ ಬೂಮರ್‌ ಎಕ್ಸ್‌ಕವೇಟರ್‌ ಬಳಸಿ ನದಿ ನೀರಿನಲ್ಲಿ ಡ್ರೆಜ್ಜಿಂಗ್‌ ನಡೆಸಲಿದೆ. ಶೋಧಕ್ಕಾಗಿ ಡ್ರೋನ್‌ ಆಧರಿತ ಇಂಟಲಿಜೆಂಟ್‌ ಅಂಡರ್‌ಗ್ರೌಂಡ್‌ ಬರೀಡ್‌ ಆಬ್ಜೆಕ್ಟ್‌ ಡಿಟೆಕ್ಷನ್‌ ಸಿಸ್ಟಂ ಅನ್ನೂ ಬಳಸಲಾಗಿದೆ. ನಾಪತ್ತೆಯಾದವರ ಮೃತದೇಹಗಳಿಗಾಗಿ ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಮೂಲಕವೂ ಶೋಧ ನಡೆಸಲಾಗುವುದು,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ಎಕ್ಸ್‌ನಲ್ಲಿ ಪೋಸ್ಟ್‌ ಒಂದರ ಮೂಲಕ ಮಾಹಿತಿ ನೀಡಿದ್ದಾರೆ.

ಈಗ ಬಳಸಲಾಗುತ್ತಿರುವ ಎಕ್ಸ್‌ಕವೇಟರ್‌ 60 ಮೀಟರ್‌ ಆಳದ ತನಕ ಮಣ್ಣನ್ನು ಅಗೆಯಬಹುದಾಗಿದೆ. ಅರ್ಜುನ್‌ ಹಾಗೂ ಇತರ ಇಬ್ಬರು ನಾಪತ್ತೆಯಾದವರಿಗಾಗಿ ಹುಡುಕಲು ಆಧುನಿಕ ರೇಡಿಯೋ ಫ್ರೀಕ್ವೆನ್ಸಿ ಸ್ಕ್ಯಾನರ್‌ ಕೂಡ ಬಳಸಲಾಗುವುದು. ಶೋಧ ಕಾರ್ಯಾಚರಣೆಯಲ್ಲಿ ಸಹಕರಿಸಲು ಎನ್ನೈಟಿಕೆ-ಸುರತ್ಕಲ್‌ನ ತಜ್ಞರ ನಾಲ್ಕು ತಂಡಗಳೂ ಆಗಮಿಸಿವೆ.  ಅರ್ಜುನ್‌ ಪತ್ತೆಹಚ್ಚುವಲ್ಲಿ ಯಾವುದೇ ವಿಳಂಬವುಂಟಾಗಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.   ಈ ಭೂಕುಸಿತದಲ್ಲಿ ಮೃತಪಟ್ಟ ಎಂಟು ಮಂದಿಯ ಮೃತದೇಹಗಳು ಇಲ್ಲಿಯ ತನಕ ಪತ್ತೆಯಾಗಿವೆ.


Share: