ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯುಜಿಡಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ; ಇಂಜಿನೀಯರರನ್ನು ತರಾಟೆಗೆ ತೆಗೆದುಕೊಂಡ ಸಹಾಯಕ ಆಯುಕ್ತೆ ಡಾ.ನಯನಾ

ಯುಜಿಡಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ; ಇಂಜಿನೀಯರರನ್ನು ತರಾಟೆಗೆ ತೆಗೆದುಕೊಂಡ ಸಹಾಯಕ ಆಯುಕ್ತೆ ಡಾ.ನಯನಾ

Sat, 10 Aug 2024 02:40:16  Office Staff   SOnews

 

ಭಟ್ಕಳ: ಭಟ್ಕಳದಲ್ಲಿ ನಡೆಯುತ್ತಿರುವ ಅಂಡರ್ಗ್ರೌಂಡ್ ಡ್ರೈನೇಜ್ ಸಿಸ್ಟಂ (ಯುಜಿಡಿ) ಕಾಮಗಾರಿಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಸಹಾಯಕ ಆಯುಕ್ತೆ ಡಾ.ನಯನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ೧೫ ದಿನಗಳ ಒಳಗೆ ಕಾಮಾಗಾರಿಯ ಕುರಿತು ಸಂಪೂರ್ಣ ವರದಿ ನೀಡುವಂತೆ ಸಹಾಯಕ ಆಯುಕ್ತರು ತಾಕೀತು ಮಾಡಿದ್ದಾರೆ.

ಕೋಟ್ಯಾಂತರ ರೂ ವೆಚ್ಚದ ಒಳಚರಂಡಿ ಕಾಮಾಗಾರಿ ಯೋಜನೆ ಕಳಪೆಯಾಗಿದ್ದು ಅಪೂರ್ಣ ಕಾಮಗಾರಿಗಳಿಗೆ ಬಿಲ್ ಪಾವತಿಸಲಾಗಿದೆ. ಭಟ್ಕಳ ಪುರಸಭೆ ಹಾಗೂ ಜಾಲಿ ಪ.ಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಮ್ಯಾನ್ ಹೋಲ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಪುರಸಭೆ ಸದಸ್ಯರು ಸಭೆಯಲ್ಲಿ ಆರೋಪಿಸಿದರು.

ಶೇ.100ರಷ್ಟು ಜನವಸತಿ ಪ್ರದೇಶವಾಗಿರುವ ಭಟ್ಕಳ ಗೌಸಿಯಾ ಬೀದಿಯು ಯುಜಿಡಿ ಪಂಪಿಂಗ್ ಸ್ಟೇಷನ್ ಸ್ಥಾಪನೆಯಾದಾಗಿನಿಂದ ನಗರದಲ್ಲಿನ ನೂರಾರು ಕೊಳವೆಬಾವಿಗಳು ಸಂಪೂರ್ಣ ವಿಫಲವಾಗಿದ್ದು ಕುಡಿಯುವ ನೀರಿನ ಬಾವಿಗಳಲ್ಲಿ ಮಲೀನ ನೀರು ಶೇಖರಣೆಗೊಳ್ಳೂತ್ತಿದೆ. ನಗರದ ಹಳೆಯ ಬಡಾವಣೆಗಳಲ್ಲಿ ಹಾದು ಹೋಗುವ ಸರಬಿ ನದಿ ಕೊಳಚೆ ಚರಂಡಿಯಾಗಿ ಮಾರ್ಪಾಡಾಗಿದ್ದು, ಇದರಿಂದ ಇಡೀ ಜನವಸತಿ ಪ್ರದೇಶವೇ ದುರ್ವಾಸನೆ ಬೀರುವ ಪ್ರದೇಶವಾಗಿ ಮಾರ್ಪಟ್ಟಿದ್ದು, ರೋಗ ರುಜಿನಗಳ ತಾಣವಾಗಿದೆ ಎಂದು ಸದಸ್ಯರು ಆರೋಪಿಸಿದರು.

ಈ ಸಂದರ್ಭದಲ್ಲಿ ಭಟ್ಕಳದ ಯುಜಿಡಿ ಕಾಮಗಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಹಾಯಕ ಆಯುಕ್ತೆ ಡಾ.ನಯನಾ,  ಇಲ್ಲಿನ ಪ್ರತಿಯೊಬ್ಬ ಸದಸ್ಯರೂ ಕೂಡ ಯುಡಿಜಿ ಕಾಮಗಾರಿ ಬಗ್ಗೆ ಅಸಮಧಾನಗೊಂಡಿದ್ದಾರೆ. ಸದಸ್ಯರು ತಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ. ಯುಜಿಡಿ ಬಗ್ಗೆ ಪ್ರತಿಯೊಬ್ಬರು ದೂರುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಘೌಸಿಯಾ ಸ್ಟ್ರೀಟ್ನಲ್ಲಿ ನೂರಾರು ಬಾವಿಗಳು ಹಾಳಾಗಿವೆ, ಸರಬಿ ನದಿಯು ಮೋರಿಯಾಗಿ ಮಾರ್ಪಟ್ಟಿದೆ. ಯುಜಿಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯ್ ಪ್ರಭು ಅವರು ಸೋಮವಾರ ಮತ್ತು ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಾರದಲ್ಲಿ ಎರಡು ದಿನ ಭಟ್ಕಳದ ಪುರಸಭೆ ಕಚೇರಿಗೆ ಹಾಜರಾಗಬೇಕು, ಹಾಜರಾತಿ ವರದಿ ನೀಡಬೇಕು, ಎಂದು ಸಹಾಯಕ ಆಯುಕ್ತರು ಆದೇಶಿಸಿದರು. ಯಾವುದೇ ಸಂದರ್ಭದಲ್ಲಿ ಯುಜಿಡಿ ಸಮಸ್ಯೆ ಬಗೆಹರಿಸಲು ವಾರಕ್ಕೊಮ್ಮೆ ಸಭೆ ನಡೆಸಿ ಕಾಮಗಾರಿ ಪರಿಶೀಲನೆ ನಡೆಸಬೇಕು ಎಂದು ಪಾಲಿಕೆ ಸದಸ್ಯರಿಗೆ ತಿಳಿಸಿದರು. ಸಮಸ್ಯೆ ಬಗೆಹರಿಸಲು ಜಲಮಂಡಳಿ ಹಾಗೂ ಯುಜಿಡಿ ಎಂಜಿನಿಯರ್ಗಳು ಪರಸ್ಪರ ಸಹಕಾರ ನೀಡುವಂತೆ ನಗರಸಭೆ ಎಂಜಿನಿಯರ್ ಅರವಿಂದ್ ಅವರಿಗೆ ಸಹಾಯಕ ಆಯುಕ್ತರು ಸೂಚಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖೈಸರ್ ಮೊಹತೆಶಮ್, ಕುಡಿಯುವ ನೀರು ಮತ್ತು ಒಳಚರಂಡಿ ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹ ಇಂಜಿನೀಯರ್ ಎಸ್. ಬಾಂದೇಕರ್, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಉಪಸ್ಥಿತರಿದ್ದರು.

 


Share: