ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರುಡೇಶ್ವರದಲ್ಲಿ ಮಾ.8ರಂದು ಮಹಾಶಿವರಾತ್ರಿ; ಆಹ್ವಾನಿತರ ಪಟ್ಟಿಯಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್

ಮುರುಡೇಶ್ವರದಲ್ಲಿ ಮಾ.8ರಂದು ಮಹಾಶಿವರಾತ್ರಿ; ಆಹ್ವಾನಿತರ ಪಟ್ಟಿಯಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್

Thu, 07 Mar 2024 01:35:14  Office Staff   S O News

ಭಟ್ಕಳ: ಶಿವ ತಾಣ ಶ್ರೀ ಮುರುಡೇಶ್ವರನ ಅಂಗಳದಲ್ಲಿ ಶಿವ ಜಾಗರಣೆಯೊಂದಿಗೆ ಮಹಾಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಈ ಕುರಿತು ಭಟ್ಕಳ ಸಹಾಯಕ ಆಯುಕ್ತೆ ಡಾ. ನಯನ  ಮಾಧ್ಯಮದವರೊಂದಿಗೆ ಮಾತನಾಡಿ ಮುರುಡೇಶ್ವರ ಶಿವ ಸನ್ನಿಧಾನಕ್ಕೆ ಹೊಂದಿಕೊಂಡು ಮಾ.8ರ ಮಹಾಶಿವರಾತ್ರಿಯಂದು ಭವ್ಯ ರಂಗ ಸಜ್ಜಿಕೆ ನಿರ್ಮಾಣಕ್ಕೆ ತಯಾರಿ ನಡೆದಿದ್ದು, ಅಮವಾಸ್ಯೆಯ ಸಮುದ್ರ ಉಬ್ಬರವನ್ನು ಗಮನದಲ್ಲಿ ಇರಿಸಿಕೊಂಡು ಕಡಲ ಕಿನಾರೆಯ ಆಸುಪಾಸಿನಲ್ಲಿ ವೇದಿಕೆ ನಿರ್ಮಿಸಲು ತೀರ್ಮಾನಿಸಲಾಗಿದೆ. 

ಸೋಜಿಗದ ಸೂಜು ಮಲ್ಲಿಗೆ ಹಾಡಿನ ಖ್ಯಾತಿಯ, ನಾಡಿನ ಖ್ಯಾತ ಗಾಯಕಿ ಅನನ್ಯ ಭಟ್ ಅವರನ್ನು ಆಹ್ವಾನಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಖರ್ಚು ವೆಚ್ಚ, ಕಲಾವಿದರ ವೇಳಾಪಟ್ಟಿಯ ಆಧಾರದಲ್ಲಿ ಇನ್ನೂ ಹಲವು ಕಲಾವಿದರನ್ನು ಸಂಭಾವ್ಯ ಆಹ್ವಾನಿತರ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಅಲ್ಲದೇ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುತ್ತಿದ್ದು, ಪ್ರತಿಭಾವಂತ ಕಲಾವಿದರು ತಮ್ಮ ವಿಶಿಷ್ಟ ಕಲಾ ಪ್ರದರ್ಶನ ಮಾಡಲಿದ್ದಾರೆ. ಕಲಾವಿದರಿಗೆ ಊಟ, ವಸತಿ ಸೌಕರ್ಯ ಮಾಡಲಾಗುತ್ತದೆ. 

ಲೇಸರ್ ಕಿರಣಗಳೊಂದಿಗೆ ಮಹಾಶಿವನ ಕಥಾ ಚಿತ್ರಣವನ್ನು ಲೇಸರ್ ಕಿರಣಗಳೊಂದಿಗೆ ಪ್ರದರ್ಶಿಸುವ ಪ್ರಸ್ತಾಪವೂ ಇದ್ದು, ಪ್ರಾಯೋಜಕರ ಲಭ್ಯತೆಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಮಹಾಶಿವರಾತ್ರಿಯ ಅಂಗವಾಗಿ ರಾಜ್ಯದ ವಿವಿದೆಡೆಯಿಂದ ಭಕ್ತರು ಮುರುಡೇಶ್ವರದೆಡೆಗೆ ಮುಖ ಮಾಡಲಿದ್ದು, ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮ ವೀಕ್ಷಿಸಲು 5-6 ಸಾವಿರ ಜನರು ಸೇರುವ ನಿರೀಕ್ಷೆ ಇದೆ. 


Share: