ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದೇಶಾದ್ಯಂತ 88 ಕ್ಷೇತ್ರಗಳಲ್ಲಿ ಚುನಾವಣೆ; ದ್ವಿತೀಯ ಹಂತ; ಶೇ.61 ಮತದಾನ

ದೇಶಾದ್ಯಂತ 88 ಕ್ಷೇತ್ರಗಳಲ್ಲಿ ಚುನಾವಣೆ; ದ್ವಿತೀಯ ಹಂತ; ಶೇ.61 ಮತದಾನ

Sat, 27 Apr 2024 07:30:48  Office Staff   Vg

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ 88 ಕ್ಷೇತ್ರಗಳಲ್ಲಿ ಶುಕ್ರವಾರ ನಡೆದಿದ್ದು, ಶೇ.61ಕ್ಕೂ ಅಧಿಕ ಮಂದಿ ಹಕ್ಕು ಚಲಾಯಿಸಿದ್ದಾರೆ.

ಈಶಾನ್ಯ ಭಾರತದ ರಾಜ್ಯವಾದ ತ್ರಿಪುರಾದಲ್ಲಿ ಗರಿಷ್ಠ (78.53 ಶೇಕಡ) ಮತದಾನವಾಗಿದ್ದು, ಉತ್ತರಪ್ರದೇಶದಲ್ಲಿ ಅತ್ಯಂತ ಕನಿಷ್ಠ (53.80 ಶೇ.) ಮತದಾನವಾಗಿದೆ.

ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲೂ ಬಿರುಸಿನ ಮತದಾನವಾಗಿದ್ದು, ಶೇ.77.8ರಷ್ಟು ಮತದಾನವಾಗಿದೆ.

ಕೆಲವೊಂದು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ದೇಶಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪಶ್ಚಿಮಬಂಗಾಳದ ಬಲೂರ್‌ ಘಾಟ್ ಮತಗಟ್ಟೆಯೊಂದರಲ್ಲಿ ಲೋಕಸಭಾ ಅಭ್ಯರ್ಥಿ, ರಾಜ್ಯ ಬಿಜೆಪಿ ಅಧ್ಯಕ್ಷಸುಕಾಂತ ಮಜುಂದಾರ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೇರಳ ಹಾಗೂ ಪಶ್ಚಿಮಬಂಗಾಳದ ಕೆಲವು ಮತಗಟ್ಟೆಗಳಲ್ಲಿ ಬೋಗಸ್ ಮತದಾನ ನಡೆದಿರುವುದಾಗಿ ವರದಿಯಾಗಿದೆ. ಅಲ್ಲದೆ ಕೆಲವೆಡೆ ಇವಿಎಂ ಯಂತ್ರಗಳಲ್ಲಿ ತೊಂದರೆಕಾಣಿಸಿಕೊಂಡಿದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಕೇರಳದ ಎಲ್ಲಾ 20 ಕ್ಷೇತ್ರಗಳು, ರಾಜಸ್ಥಾನದ 13 ಕ್ಷೇತ್ರಗಳು, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ ತಲಾ ಎಂಟು , ಮಧ್ಯಪ್ರದೇಶದ ಆರು, ಅಸ್ಸಾಂ ಹಾಗೂ ಬಿಹಾರದ ತಲಾ ಐದು, ಛತ್ತೀಸ್‌ಗಡ ಹಾಗೂ ಪಶ್ಚಿಮಬಂಗಾಳದ ತಲಾ ಮೂರು, ಮಣಿಪುರ, ತ್ರಿಪುರಾ ಹಾಗೂ ಜಮ್ಮು-ಕಾಶ್ಮೀರದ ತಲಾ ಒಂದು ಕ್ಷೇತ್ರಗಳಿಗೆ ಮತದಾನವಾಗಿದೆ.

ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಶಶಿ ತರೂರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ನಟ-ರಾಜಕಾರಣಿ ಅರುಣ್‌ಗೋವಿಲ್.

ಕಣದಲ್ಲಿರುವ ಪ್ರಮುಖರು. ಗಜೇಂದ್ರ ಸಿಂಗ್ ಶೆಖಾವತ್, ಹೇಮಾಮಾಲಿನಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಅವರು ಈ ಸಲದ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆಯವರೆಗೂ ಮುಂದುವರಿಯಿತು. ಎರಡನೇ ಹಂತದ ಚುನಾವಣೆಯೊಂದಿಗೆ ಕೇರಳ, ರಾಜಸ್ಥಾನ ಹಾಗೂ ತ್ರಿಪುರಾದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ.

ದ್ವಿತೀಯ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ 1,202 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 102 ಮಂದಿ ಮಹಿಳೆಯರು ಹಾಗೂ ಇಬ್ಬರು ತೃತೀಯ ಲಿಂಗಿಗಳು. ಎರಡನೇ ಹಂತದಲ್ಲಿ ಬಿಎಸ್ಪಿ ಗರಿಷ್ಠ 74 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ 69 ಹಾಗೂ ಕಾಂಗ್ರೆಸ್‌ನಿಂದ 68 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಅಶೋಕ್ ಬಾಲಾವಿ ಅವರ ನಿಧನ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿದ್ದ ಮತದಾನವನ್ನು ರದ್ದುಪಡಿಸಲಾಗಿದ್ದು, ಅದನ್ನು ಮೇ 7ಕ್ಕೆ ಮುಂದೂಡಲಾಗಿದೆ. ಎಪ್ರಿಲ್ 19ರಂದು ಮೊದಲ ಹಂತದ ಚುನಾವಣೆಯಲ್ಲಿ 102 ಕ್ಷೇತ್ರಗಳಿಗೆ ಮತದಾನವಾಗಿತ್ತು.


Share: