ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಸವರ್ಣೀಯರಿಂದ ಹಲ್ಲೆ;21 ಮಂದಿಯ ಬಂಧನ

ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಸವರ್ಣೀಯರಿಂದ ಹಲ್ಲೆ;21 ಮಂದಿಯ ಬಂಧನ

Mon, 16 Sep 2024 13:22:58  Office Staff   Vb

ಬಾಗಲಕೋಟೆ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ಉಗಲವಾಟ ಗ್ರಾಮದ ಅರ್ಜುನ್ ಮಾದರ ಎಂದು ಗುರುತಿಸಲಾಗಿದೆ. ಈತ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಿಗೌಡ ಸತ್ಯನ್ನವರ, ಮಂಜುನಾಥ ಮೂಲಿಮನಿ ಸೇರಿದಂತೆ ಒಟ್ಟು 21 ಜನರ ಮೇಲೆ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಒಟ್ಟು 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾಡಳಿತ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ, ಎರಡು ಸಮುದಾಯದವರನ್ನು ಸೇರಿಸಿ, ಮಾತುಕತೆ ಮಾಡಿ ಸೌಹಾರ್ದದಿಂದ ಇರುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಎಸ್‌ಪಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.

ವಿವರ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ದ್ಯಾಮವ್ವ ದೇವಿಯ ಗುಡಿ ಪ್ರವೇಶ ಮಾಡಿದ್ದಾನೆ ಎಂದು ಸವರ್ಣೀಯರು ದಲಿತ ಯುವಕನಿಗೆ ಜಾತಿ ನಿಂದನೆ ಮಾಡಿ, ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಥಳಿತಕ್ಕೊಳಗಾಗಿರುವ ಅರ್ಜುನ್ ಮಾದರ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.


Share: