ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ನಾಳೆ ಜೂ. ೪ಕ್ಕೆ ಮತ ಎಣಿಕೆ; 13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ.

ಕಾರವಾರ: ನಾಳೆ ಜೂ. ೪ಕ್ಕೆ ಮತ ಎಣಿಕೆ; 13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ.

Tue, 04 Jun 2024 00:39:28  Office Staff   S O News

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆದ ಚುನಾವಣೆ, ಮತ ಎಣಿಕೆಯು, ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಜೂ. ೪ಕ್ಕೆ ನಡೆಯಲಿದ್ದು, ಭದ್ರತಾ ಕೊಠಡಿಯಲ್ಲಿನ ಮತ ಯಂತ್ರಗಳಲ್ಲಿ ಕಣದಲ್ಲಿರುವ 13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್, ಭಾರತೀಯ ಜನತಾ ಪಾರ್ಟಿಯ ಕಾಗೇರಿ ವಿಶ್ವೇಶ್ವರ ಹೆಗಡೆ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಜ್ಯ ಸಮಿತಿಯ ವಿನಾಯಕ ಮಂಗೇಶ ನಾಯ್ಕ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಅವರ ಸೋಲು ಗೆಲುವುಗಳು ನಿರ್ಧಾರವಾಗಲಿದೆ.

ಮೇ 7 ರಂದು ನಡೆದಿದ್ದ ಚುನಾವಣೆಯಲ್ಲಿ ಶೇ.76.53 ರಷ್ಟು ಮತದಾನವಾಗಿದ್ದು, 6,33,630 ಪುರುಷರು, 6,22,392 ಮಹಿಳೆಯರು ಹಾಗೂ 5 ಮಂದಿ ಇತರರು ಸೇರಿದಂತೆ ಒಟ್ಟು 12,56,027 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. 

 ಜಿಲ್ಲೆಯಲ್ಲಿ ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 562 ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು ಮತ ಎಣಿಕೆ ಕಾರ್ಯವು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ.

ಜಿಲ್ಲೆಯಲ್ಲಿ ಮನೆಯಿಂದಲೇ ನಡೆದ ಮತದಾನ ದಲ್ಲಿ 85 ವರ್ಷ ಮೇಲ್ಪಟ್ಟ 2985 ಮಂದಿ, 1924 ವಿಕಲಚೇತನರು , 253 ಅಗತ್ಯ ಸೇವೆಯ ನೌಕರರು ಹಾಗೂ 1164 ಚುನವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮತದಾನ ಸೇರಿದಂತೆ ಒಟ್ಟು 6236 ಮತದಾನವಾಗಿದೆ.

ಮಧ್ಯಾಹ್ನ 12 ಗಂಟೆಯ ವೇಳೆಗೆ ಸಂಪೂರ್ಣ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದ್ದು, ಖಾನಾಪುರ ವಿಧಾನಸಭಾ ಕ್ಷೆತ್ರದಲ್ಲಿ 23 ಸುತ್ತು , ಕಿತ್ತೂರು 17, ಹಳಿಯಾಳ 16, ಕರವಾರ 19, ಕುಮಟಾ 16, ಭಟ್ಕಳ 18, ಶಿರಸಿ 19, ಯಲ್ಲಾಪುರ ದಲ್ಲಿ 17 ಸುತ್ತಿನ ಮತ ಎಣಿಕೆ ನಡೆಯಲಿದೆ .

ಮತ ಎಣಿಕೆ ಕಾರ್ಯಕ್ಕಾಗಿ, 4 ಡಿವೈಎಸ್ಪಿ, 15 ಸಿಪಿಐ ಗಳು, 40 ಪಿಎಸ್‌ಐ, 54 ಎ.ಎಸ್.ಐ, 104 ಹೆಡ್ ಕಾನ್ಸ್ಟೇಬಲ್, 170 ಪೊಲೀಸ್ ಕಾನ್ಸ್ಟೇಬಲ್, 38 ಮಹಿಳಾ ಕಾನ್ಸ್ಟೇಬಲ್, 5 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕೆ.ಎಸ್.ಆರ್.ಪಿ ಮತ್ತು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 1 ತುಕಡಿಗಳನ್ನು ನಿಯೋಜಿಸಲಾಗಿದೆ.


Share: