ಮಂಗಳೂರು: ಮಾದಕ ವಸ್ತುವಿರುವ ಕೊರಿಯರ್ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತರು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ಎಂದು ನಂಬಿಸಿ 35 ಲಕ್ಷ ರೂ. ವಂಚಿಸಿರುವ ಪ್ರಕರಣ ವರದಿಯಾಗಿದೆ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ: ವಂಚನೆಗೊಳಗಾದ ವ್ಯಕ್ತಿಗೆ ಸೆ.24ರಂದು ಮುಂಬೈ ಕೊರಿಯರ್ ಸರ್ವೀಸ್ ಸೆಂಟರ್ನಿಂದ ಕಾರ್ತಿಕ್ ಶರ್ಮಾ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾನೆ ಎನ್ನಲಾಗಿದೆ. 'ನಿಮ್ಮ ಹೆಸರಿನಲ್ಲಿ ಮುಂಬೈಯಿಂದ ತೈವಾನ್ಗೆ ಕಾನೂನು ಬಾಹಿರ ಹಾಗೂ ಮಾದಕ ವಸ್ತುಗಳಿರುವ ಕೊರಿಯರ್ ಸಾಗಾಟವಾಗುತ್ತಿದ್ದು, ಇದನ್ನು ಮುಂಬೈ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ನೀವು ಸೈಬರ್ ಕ್ರೈಮ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿ ನಂಬರ್ ನೀಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಆ ನಂಬರ್ಗೆ ಕರೆ ಮಾಡಿದಾಗ ಸೈಬರ್ಕ್ರೈಮ್ ಅಧಿಕಾರಿ ಪ್ರಾಣೇಶ್ ಗುಪ್ತಾ ಎಂದು ಪರಿಚಯಿಸಿಕೊಂಡು ವೀಡಿಯೊ ಕಾಲ್ ಮೂಲಕ ಮಾತನಾಡಿದ್ದಾನೆ. ಅಂತರ್ ರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಿಸಿದ್ದು ನಿಮ್ಮನ್ನು ಬಂಧಿಸಲಾಗುವುದು.
ಪ್ರಕರಣದಿಂದ ಮುಕ್ತಗೊಳಿಸಲು ಆರೋಪಿಗಳು ಹಣದ ಬೇಡಿಕೆಯಿಟ್ಟರು. ಇದರಿಂದ ಆತಂಕಗೊಂಡ ದೂರುದಾರರು ಹಂತಹಂತವಾಗಿ ಬ್ಯಾಂಕ್ ಖಾತೆಯಿಂದ 35ಲಕ್ಷ ರೂ. ವರ್ಗಾಯಿಸಿದ್ದಾರೆ. ಬಳಿಕ ಮೋಸ ಹೋಗಿರುವುದಾಗಿ ತಿಳಿದು ಬಂದಿದ್ದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.