ಬೆಂಗಳೂರು ಏಪ್ರಿಲ್ ೨೧: ಮೈಸೂರನ್ನು ಹಸಿರು ನಗರವನ್ನಾಗಿ ಮಾಡಲು ಬ್ರಿಟಿಷ್ ರಾಯಭಾರ ಕಚೇರಿ ತನ್ನ ಸಹಾಯಹಸ್ತ ಚಾಚಿದೆ.
ಈ ಸಂಬಂಧ ಬ್ರಿಟಿಷ್ ಉಪ ರಾಯಭಾರಿ ರಿಚರ್ಡ್ ಹೈಡ್, ವಾತಾವರಣ ಬದಲಾವಣೆ ಮತ್ತು ಇಂಧನ ಕಾರ್ಯದರ್ಶಿ ಸೆರಗಸ್ ಆಲ್ಡ್ ಹಾಗೂ ಬ್ರಿಟಿಷ್ ರಾಯಭಾರ ಕಚೇರಿಯ ಹಿರಿಯ ಸಲಹೆಗಾರರಾದ ವಿದ್ಯಾ ಸೌಂದರ್ರಾಜನ್ ಅವರು ಇಂದು ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.
ಭೇಟಿಯ ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವರು ಬ್ರಿಟಿಷ್ ತಂಡ ಮೈಸೂರು ನಗರವನ್ನು ಹಸಿರು ನಗರವನ್ನಾಗಿ ಮಾಡುವ ಇಂಗಿತ ವ್ಯಕ್ತಪಡಿಸಿದರು. ಈಗಾಗಲೇ ಈ ತಂಡ ಮೈಸೂರಿನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದೆ. ಅವರ ಅಪೇಕ್ಷೆ, ನಿರೀಕ್ಷೆ ಏನೆಂಬುದನ್ನು ಮೈಸೂರಿನ ಜಿಲ್ಲಾಧಿಕಾರಿಗಳೊಡನೆ ಚರ್ಚಿಸಿದ ನಂತರ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗುವುದು. ಆರ್ಥಿಕವಾಗಿ ಏನು ಸಹಾಯ ಮಾಡಲಿರುವರೆಂಬ ಬಗ್ಗೆ ಇನ್ನೂ ವಿವರ ತಿಳಿಯದೆಂದರು.
ಮೈಸೂರು ನಗರಕ್ಕೆ ಸಾಂಸ್ಕೃತಿಕ ನಗರವೆಂಬ ಹೆಗ್ಗಳಿಕೆ ಇದೆ. ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಕೇಂದ್ರದ ಅನುದಾನವನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.
ಮತ್ತೆ ಟಾಂಗ ಸವಾರಿ:
ಟಾಂಗಗಳಲ್ಲಿ ಪ್ರಯಾಣ ಮಾಡುವುದು ಒಳ್ಳೆಯ ಅನುಭವ. ಮೈಸೂರಿನಲ್ಲಿ ಟಾಂಗಗಳಿಗೆ ಮಹತ್ವ ನೀಡಿ ಅವುಗಳಲ್ಲಿ ಜನರು ವಿಶೇಷವಾಗಿ ಪ್ರವಾಸಿಗರು ಪ್ರಯಾಣಿಸಲು ಅನುವು ಮಾಡಿಕೊಡಲಾಗುವುದು. ಪ್ರತ್ಯೇಕ ಟಾಂಗ ವಲಯ ಮಾಡಬೇಕೆಂಬ ಇಚ್ಫೆ ಇದೆ ಎಂದು ಸಚಿವರು ತಿಳಿಸಿದರು.
ಸೋಲಾರ್ ವಿದ್ಯುತ್ ಮತ್ತು ಮಳೆ ನೀರು ಕೊಯ್ಲು ಅಳವಡಿಸಿ, ಹವಾನಿಯಂತ್ರಕಗಳ ಅಗತ್ಯವಿಲ್ಲದಂತೆ ಮಾಡಿ ಮೈಸೂರಿನ ಸರ್ಕಾರಿ ಕಟ್ಟಡಗಳನ್ನು ಹಸಿರು ಕಟ್ಟಡಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೈಸೂರಿನ ಹಿಂದಿನ ಉಸ್ತುವಾರಿ ಸಚಿವರು ಕೈಗೆತ್ತಿಕೊಂಡ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅವರು ತಿಳಿಸಿದರು.
ಎಲ್ಲಾ ನಗರಗಳಿಗೂ ಸೌರ ವಿದ್ಯುತ್ :
ಎಲ್ಲಾ ನಗರಗಳಲ್ಲಿ ಮುಂದಿನ ೪-೫ ವರ್ಷಗಳಲ್ಲಿ ಸೌರ ವಿದ್ಯುತ್ನ್ನು ಬಳಸಲು ಯೋಜಿಸಲಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ೩೦೦ ಕೋಟಿ ರೂ ಉಳಿತಾಯವಾಗಲಿದೆ ಎಂದು ಸಚಿವರು ತಿಳಿಸಿದರು.
ಹುಬ್ಬಳ್ಳಿ - ಬೆಳಗಾವಿ ಕುಡಿಯುವ ನೀರಿನ ಸಮಸ್ಯೆ:
ಹುಬ್ಬಳ್ಳಿಯಲ್ಲಿ ೮-೯ ದಿನಕ್ಕೊಮ್ಮೆ ಮತ್ತು ಬೆಳಗಾವಿಯಲ್ಲಿ ೫-೬ ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಗುಣಮಟ್ಟದ ನೀರಿನ ಕೊಳವೆಗಳನ್ನು ಅಳವಡಿಸದ ಕಾರಣ ಶೇ ೫೦ - ೫೫ ರಷ್ಟು ನೀರು ಸೋರಿಕೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ವಿದ್ಯುತ್ ಕೊರತೆಯಿಂದಾಗಿ ನೀರು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿಗೆ ಆದ್ಯತೆ ಮೇಲೆ ವಿದ್ಯುತ್ ನೀಡಲು ಹೆಸ್ಕಾಂ ಅಧಿಕಾರಿಗಳೊಡನೆ ಮಾತನಾಡಿದ್ದೇನೆ. ಈಗ ಹುಬ್ಬಳ್ಳಿಯಲ್ಲಿ ಕುಡಿಯುವ ನೀರು ಒದಗಿಸಲು ೧೮ ಟ್ಯಾಂಕರ್ಗಳನ್ನು ಉಪಯೋಗಿತ್ತಿದ್ದು, ಈ ವಾರದಲ್ಲಿ ಮತ್ತೆ ೮ ಟ್ಯಾಂಕರ್ಗಳನ್ನು ಬಳಸಿಕೊಳ್ಳಲಾಗುವುದು ಎಂದರು.
೧೬ ಪಟ್ಟಣಗಳಿಗೆ ಎಲ್ಲಾ ದಿನಗಳಲ್ಲೂ ಕುಡಿಯುವ ನೀರು:
ಕುಡಿಯುವ ನೀರನ್ನು ಹುಮ್ನಾಬಾದ್, ಚಿಟ್ಟಗುಪ್ಪ, ಸೇಡಂ, ಹುಕ್ಕೇರಿ, ಸಂಕೇಶ್ವರ, ಬಿಜಾಪುರ, ಮಂಡ್ಯ, ಶ್ರೀರಂಗಪಟ್ಟಣ, ಕಡೂರು, ಬೀರೂರು, ಕುಶಾಲನಗರ, ತುಮಕೂರು, ತಿಪಟೂರು, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಮಾಲೂರು ನಗರಗಳಿಗೆ ೨೪ ಘಿ ೭ ಮಾದರಿಯಲ್ಲಿ ಸರಬರಾಜು ಮಾಡಲಾಗುವುದು. ಈ ಯೋಜನೆಯ ಅಂದಾಜು ವೆಚ್ಚ ೯೩೨ ಕೋಟಿ ರೂ. ಚಾಲ್ತಿಯಲ್ಲಿರುವ ಯೋಜನೆಯಿಂದ ಲಭ್ಯವಿರುವ ಹಣ ೩೦ ಕೋಟಿ ರೂ. ಇತರೆ ಮೂಲಗಳಿಂದ ಲಭ್ಯವಿರುವ ಹಣ ೧೦ ಕೋಟಿ ರೂ. ನಗರಸಭೆಗಳು ನಿರ್ಣಯವನ್ನು ಮಾಡಿ ಶೇ ೧೦ ರಷ್ಟು ವೆಚ್ಚ ಭರಿಸುವುದಾಗಿ ತಿಳಿಸಿದೆ. ಬಾಕಿ ಹಣವನ್ನು ಬ್ಯಾಂಕಿನಿಂದ ಸಾಲ ಪಡೆಯಲಾಗುವುದು ಎಂದರು.
ನೀರಿನ ದರದಲ್ಲಿ ಹೆಚ್ಚಳ ಸಧ್ಯಕ್ಕಿಲ್ಲ
ಶೇ ೩೦ ರಿಂದ ೪೦ ರಷ್ಟು ನೀರಿನ ದರ ಪಾವತಿಯಾಗುತ್ತಿಲ್ಲ. ದರ ವಸೂಲು ಮಾಡಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ನೀರಿನ ದರ ತಕ್ಷಣ ಹೆಚ್ಚಿಸಲಾಗುವುದಿಲ್ಲ . ನೀರು ಸರಬರಾಜು ಮತ್ತು ನಿರ್ವಹಣಾ ವೆಚ್ಚವನ್ನು ಆಧರಿಸಿ ದರ ಹೆಚ್ಚಿಸುವ ಬಗ್ಗೆ ತೀರ್ಮಾನಿಸಲಾಗುವುದೆಂದರು.
ಸರ್ಕಾರದ ಕಡೆ ತೀರ್ಪು ಬರಲು ಕ್ರಮ:
ಸರ್ಕಾರದ ಮೊಕದ್ದಮೆಗಳಲ್ಲಿ ಸರ್ಕಾರದ ಕಡೆ ತೀರ್ಪು ಬರುತ್ತಿಲ್ಲ. ಈ ಬಗ್ಗೆ ಅಡ್ವೊಕೇಟ್ ಜನರಲ್ ಅವರೊಡನೆ ಮಾತನಾಡಿದ್ದೇನೆ. ಸರ್ಕಾರಿ ಇಲಾಖೆ ಹಾಗೂ ಸರ್ಕಾರಿ ವಕೀಲರ ನಡುವೆ ಇರುವ ಸಂಪರ್ಕ ಕಂದಕದಿಂದಾಗಿ ಇಲಾಖೆಗಳಿಂದ ವಕೀಲರಿಗೆ ಪೂರ್ಣ ಮಾಹಿತಿ ದೊರೆಯುತ್ತಿಲ್ಲವೆಂದು ತಿಳಿದು ಬಂದಿದೆ. ಈ ನ್ಯೂನತೆಯನ್ನು ಸರಿಪಡಿಸಲು ತಿಂಗಳಿಗೊಮ್ಮೆ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದೆಂದು ಸಚಿವರು ತಿಳಿಸಿದರು.
ಹಸಿವಿನಿಂದ ಮೃತಪಟ್ಟಿಲ್ಲ:
ಹುಣಸೂರಿನ ಹಾಡಿಯ ಸಿದ್ಧಯ್ಯ ಹಸಿವೆಯಿಂದ ನಿಧನರಾದರು ಎಂಬ ಸುದ್ಧಿ ಸತ್ಯಕ್ಕೆ ದೂರ ಮೃತರ ಮನೆಗೆ ಭೇಟಿ ನೀಡಿ, ಮನೆಯವರೊಡನೆ ಚರ್ಚಿಸಿದಾಗ ಅವರು ಮರಣ ಹೊಂದಿದ್ದು, ಹಸಿವಿನಿಂದ ಅಲ್ಲ, ಅವರಿಗೆ ಬೇರೆ ಆರೋಗ್ಯ ಸಮಸ್ಯೆಗಳು ಇದ್ದವು. ಮರಣಾನಂತರ ವರದಿ ಕೂಡ ಮರಣ ಹಸಿವಿನಿಂದ ಅಲ್ಲ ಎಂಬುದನ್ನು ಶೃತಪಡಿಸಿದೆ ಎಂದು ಸ್ಪಷ್ಟಪಡಿಸಿದರು.