ಬೆಂಗಳೂರು, ಏ.26: ಭಾರತೀಯ ವಿಜ್ಞಾನ ಮಂದಿರ ಐಐಎಸ್ಸಿಯ ಉದ್ದೇಶಿತ ಎರಡನೇ ಶಾಖೆ ಚಿತ್ರದುರ್ಗದಲ್ಲೇ ಸ್ಥಾಪನೆಯಾಗಲಿದೆ. ಆಂಧ್ರದ ಪಾಲಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಪೊಲೀಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ವಿಷಯ ತಿಳಿಸಿದರು.
ಆಂಧ್ರಪ್ರದೇಶದ ಅನಂತಪುರದಲ್ಲಿ ಬೆಂಗಳೂರಿನ ಐಐಎಸ್ಸಿಯ ಎರಡನೇ ಶಾಖೆ ಆರಂಭಿಸಲು ಆಂಧ್ರದ ಮುಖ್ಯಮಂತ್ರಿ ರೋಸಯ್ಯ ಹಾಗೂ ಕೇಂದ್ರ ಶಿಕ್ಷಣ ಸಚಿವ ಕಪಿಲ್ ಸಿಬಲ್ ಮಾತುಕತೆ ನಡೆಸಿದ್ದಾರೆ ಎಂಬ ಮಾಧ್ಯಮದ ವರದಿಯನ್ನು ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ವಿಜ್ಞಾನ ಸಂಸ್ಥೆ ಶಾಖಾ ಸಂಸ್ಥೆ ಸ್ಥಾಪನೆಗೆ ಭೂಮಿ ಖರೀದಿಸಲಾಗಿದೆ, ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲು ಬೇಕಾದ ಸಮೀಕ್ಷೆ ಕಾರ್ಯ ಕೂಡ ಪೂರ್ಣಗೊಂಡಿದೆ. ಚಿತ್ರದುರ್ಗದಲ್ಲಿ ಐಐಎಸ್ಸಿ ಶಾಖೆ ಆರಂಭಗೊಳ್ಳಲಿದೆ ಎಂದು ಯಡಿಯೂರಪ್ಪ
ಸ್ಪಷ್ಟಪಡಿಸಿದರು.
ದಿನಪತ್ರಿಕೆಯಲ್ಲಿ ಐಐಎಸ್ಸಿ ಸ್ಥಳಾಂತರಬಗ್ಗೆ ವರದಿ ಪ್ರಕಟವಾದ ಮೇಲೆ ಪ್ರತಿಕ್ರಿಯಿಸಿದ ಚಿತ್ರದುರ್ಗದ ಸಂಸದ ಜನಾರ್ಧನ ಸ್ವಾಮಿ ಅವರು, ದುರ್ಗದಲ್ಲೇ ಐಐಎಸ್ಸಿ ಸ್ಥಾಪನೆಯಾಗಲಿದೆ, ಇನ್ನು ಹದಿನೈದು ದಿನಗಳಲ್ಲಿ ಕಪಿಲ್ ಸಿಬಲ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರ ಫಾರಂ ವಲಯದಲ್ಲಿ ಈಗಾಗಲೇ 1500 ಎಕರೆ ಭೂಮಿಯನ್ನು ಖರೀದಿಸಿದೆ.
ಕೃಪೆ:ದಟ್ಸ್ ಕನ್ನಡ