ಭಟ್ಕಳ, ಜನವರಿ 21:ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನದ ನೂತನ ಸಭಾಭವನದ ಉದ್ಘಾಟನೆ ಹಾಗೂ ಎಲ್ ಎಸ್ ನಾಯ್ಕರು ನೀಡಿದ ಸ್ವರ್ಣ ಕಿರಿಟವನ್ನು ದೇವರಿಗೆ ಸಮರ್ಪಿಸುವ ಕಾರ್ಯಕ್ರಮ ನಾಳೆ ಬೆಳಿಗ್ಗೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಟಿ ಎನ್ ನಾಯ್ಕ ಹೇಳಿದರು.
ಅವರು ಆಸಕೇರಿಯ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ನಾಳೆ ಬೆಳಿಗ್ಗೆ ೧೦.೩೦ಕ್ಕೆ ಆರಂಭಗೊಳ್ಳಲಿರುವ ಕಾರ್ಯಕ್ರಮವನ್ನು ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹರತಾಳು ಹಾಲಪ್ಪ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಜೆ ಡಿ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಧು ಬಂಗಾರಪ್ಪ, ಜೆ ಎನ್ ನಾಯ್ಕ ಹಾಗೂ ಎಲ್ ಎಸ್ ನಾಯ್ಕರು ಪಾಲ್ಗೊಳ್ಳಲಿದ್ದಾರೆ ಎಂದ ಅವರು ನೂತನ ಸಭಾಭವನವನ್ನು ಸುಮಾರು ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಸಜ್ಜಿತವಾದ ಸಭಾಭವನದಲ್ಲಿ ೧ ಸಾವಿರ ಮಂದಿ ಕುಳಿತುಕೊಳ್ಳಬಹುದಾಗಿದ್ದು, ಇದು ಮುಂದಿನ ದಿನಗಳಲ್ಲಿ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೂ ಅನುಕೂಲವಾಗಲಿದೆ.
ಸಮಾಜದ ಹಿರಿಯ ಮುಖಂಡರಾದ ಎಲ್ ಎಸ್ ನಾಯ್ಕರು ದೇವರಿಗೆ ಸ್ವರ್ಣ ಕಿರಿಟವನ್ನು ನೀಡಿದ್ದು, ಅದನ್ನು ಇದೇ ಸಂದರ್ಭದಲ್ಲಿ ಸ್ವಾಮೀಜಿಯವರಿಂದ ಸಮರ್ಪಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಉಪಾಧ್ಯಕ್ಷ ಪರಮೇಶ್ವರ ನಾಯ್ಕ,ಕಾರ್ಯದರ್ಶಿ ಗಣಪತಿ ನಾಯ್ಕ,ಮುಖಂಡರಾದ ಎಲ್ ಎಸ್ ನಾಯ್ಕ,ಮಳ್ಳಾ ನಾಯ್ಕ, ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ಈರಪ್ಪ ಗರ್ಡಿಕರ್,ಕೃಷ್ಣಾ ನಾಯ್ಕ, ಶ್ರೀಧರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.