ಭಟ್ಕಳ, ಜನವರಿ 17:ಕಬಡ್ಡಿ ಕ್ರೀಡೆಯು ಈಗ ಮಣ್ಣಿನ ಆಟವಾಗಿ ಉಳಿದಿಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಈಗ ಅದು ಸಿಂಥೆಟಿಕ್ ಮೈದಾನದಲ್ಲಿ ಆಡಲ್ಪಡುತ್ತಿದೆ, ಇದನ್ನು ಹೊರ ರಾಷ್ಟ್ರಗಳು ತೆಗೆದುಕೊಂಡು ಹೋಗುವುದಕ್ಕೆ ಮುಂಚೆ ನಾವು ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬ್ಬಡ್ಡಿಯನ್ನು ಉಳಿಸಿಬೆಳೆಸಬೇಕಾಗಿದೆ ಎಂದು ಭಾರತೀಯ ಸೇನೆಯ ಕಬ್ಬಡಿ ತಂಡದ ಮಾಜಿ ನಾಯಕ ಜಗದೀಶ್ ಕುಂಬ್ಳೆ ಹೇಳಿದರು.
ಅವರು ಶನಿವರದಂದು ಭಟ್ಕಳ ತಾಲೂಕ ಕಬ್ಬಡಿ ಫೆಡೆರೆಶನ್ ವತಿಯಿಂದ ಇಲ್ಲಿನ ಹೋಟೆಲ್ ವೈಭವದ ಪಕ್ಕದ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಸೌಹಾರ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಭಟ್ಕಳದಲ್ಲಿ ಕಬ್ಬಡ್ಡಿ ಪ್ರೇಮಿಗಳ ದಂಡೆ ಇರುವುದು ತಮಗೆ ಖುಷಿ ತಂದಿದೆ ಎಂದ ಅವರು ಇಲ್ಲಿಂದ ರಾಷ್ಟ್ರೀಯ ಮಟ್ಟದ ಆಟಗಾರರು ಸೃಷ್ಟಿಯಾಗಬೇಕು, ಕಬ್ಬಡ್ಡಿ ಆಟಗಾರರಿಗೆ ಸರಕಾರ ಉದ್ಯೋಗವನ್ನು ನೀಡುತ್ತದೆ ತಾನು ಕ್ರೀಡಾ ಕೋಟಾದಡಿ ಆಯ್ಕೆಯಾಗಿ ಈಗ ರಾಷ್ಟ್ರಕ್ಕಾಗಿ ಆಡುತ್ತಿದ್ದೇನೆ ಎಂದರು
ಶಾಂತಿಯ ದ್ಯೋತಕವಾದ ಪಾರಿವಾಳವನ್ನು ಹಾರಿಬಿಡುವುದರ ಮೂಲಕ ಶಾಸಕ ಜೆ.ಡಿ.ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಟ್ಕಳದಲ್ಲಿ ವಿವಿಧ ಕೋಮುಗಳಲ್ಲಿ ಶಾಂತಿ ಸಾಮರಸ್ಯವನ್ನು ಮೂಡಿಸುವ ಕಾರ್ಯ ಈ ಸೌಹಾರ್ಧ ಕಬ್ಬಡ್ಡಿ ಪಂದ್ಯಾವಳಿಯಿಂದಾಗಬೇಕು, ಇಲ್ಲಿ ಪ್ರತಿಯೊಬ್ಬರ ಹೃದಯದಲ್ಲಿ ಪ್ರೀತಿ ವಿಶ್ವಾಸವನ್ನು ಬಿತ್ತುವ ಕಾರ್ಯವಾಗಬೇಕು ಎಂದ ಅವರು ಭಟ್ಕಳ ತಾಲೂಕಿನಲ್ಲಿ ಸ್ಥಳದ ಕೊರತೆಯಿಂದಾಗಿ ಕ್ರೀಡಾಂಗಣ ನಿರ್ಮಾಣ ದುಸ್ತರವಾಗಿದೆ ಸರಕಾರದಿಂದ ಕ್ರೀಡಾಂಗಣಕ್ಕಾಗಿ ಸುಮಾರು 70 ಲಕ್ಷ ರೂ ಮಂಜೂರು ಆಗಿದೆ ಎಂದು ತಿಳಿಸಿದ ಅವರು ಸೂಕ್ತ ಸ್ಥಳವನ್ನು ಗುರುತಿಸಿ ಕ್ರೀಡಾಂಗಣ ನಿರ್ಮಾಣದ ಕಾಮಗಾರಿಗೆ ಚಾಲನೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಾಮೋದರ ಗರ್ಡಿಕರ ವಹಸಿದ್ದರು. ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಹಾಶಿಮ್, ಪುರಸಭಾ ಸದಸ್ಯ ಇನಾಯತುಲ್ಲಾ ಶಾಬಂದ್ರಿ, ಸಿಪಿಐ ಗುರು ಮತ್ತೂರು ಮಾತನಾಡಿದರು. ಭಟ್ಕಳ ತಾಲೂಕಾ ಕಬ್ಬಡ್ಡಿ ಫೆಡರೆಶನ್ ಅಧ್ಯಕ್ಷ ಇಮ್ತಿಯಾಜ್ ಉದ್ಯಾವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೆಂಕಟ್ರಮಣ ಮೊಗೇರ್ ಸ್ವಾಗತಿಸಿದರು. ಪೇಡರೇಶನ್ ಖಜಾಂಚಿ ಅಝೀಝುರ್ಹ್ಮಾನ್ ಕುರಾನ್ ಪಠಿಸಿದರು. ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಝಾ ಮಾನ್ವಿ ಅನುವಾದವನ್ನು ಮಾಡಿದರು. ಈಶ್ವರ ನಾಯ್ಕ ವಂದಿಸಿದರು ಎಮ್ ಬಿ.ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.