ಕತ್ತರಿಸಿ..... ನಾಲಿಗೆ ಕೀಳಿ..... ಹೀಗೆಲ್ಲಾ ಮೇಲಿಂದ ಮೇಲೆ ಕರೆ ಕೊಡುತ್ತಿರುವ ಭೂಪ ಯಾರು? ನಿಮಗೂ ಗೊತ್ತು. ಹೀಗೆಲ್ಲಾ ಕರೆ ಕೊಡುತ್ತಿರುವವರು ಸಾಮಾನ್ಯ ವ್ಯಕ್ತಿಯಲ್ಲ. ಕರ್ನಾಟಕ ರಾಜ್ಯದ `ಸನ್ಮಾನ್ಯ' ಮುಖ್ಯಮಂತ್ರಿಗಳು. ಭಾರತದ ಸಂವಿಧಾನವನ್ನು, ಕಾನೂನಿನ ಆಡಳಿತವನ್ನು ರಕ್ಷಿಸುವುದಾಗಿ ಪ್ರಮಾಣವಚನ ಸ್ವೀಕರಿಸಿ ರಾಜ್ಯದ ಅಧಿಕಾರ ಸೂತ್ರ ಹಿಡಿದ ಬಿಜೆಪಿಯ ಮುಖಂಡರಾದ ಯಡಿಯೂರಪ್ಪ ಇಂತಹ.... ಕತ್ತರಿಸು, ಕೀಳು... ಎಂದು ಕರೆ ನೀಡಲು ಕಾರಣವಾದರು ಏನು.? ಇತ್ತೀಚಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಚರ್ಚಗಳು, ಮಸೀದಿಗಳ ಮೇಲೆ ಮತ್ತೊಂದು ಸುತ್ತಿನ ದಾಳಿಗಳಾದವು. ಬಿಜೆಪಿ ಸರ್ಕಾರದ ಅಡಿಯಲ್ಲಿ ಅಲ್ಪ ಸಂಖ್ಯಾತರ ಆರಾಧನಾ ಕೇಂದ್ರಗಳಿಗೆ ರಕ್ಷಣೆ ಇಲ್ಲ ಎಂದು ವ್ಯಾಪಕವಾಗಿ ಟೀಕೆಗಳು ವ್ಯಕ್ತವಾದವು. ಪ್ರಜಾಪ್ರಭುತ್ವ ವ್ಯವಸ್ಧೆಯಲ್ಲಿ ಸಮಾಜದ ಹಿತಕಾಯುವ ದೃಷ್ಠಿಯಿಂದ ಸಮಾಜದಲ್ಲಿನ ಅನಾಹುತಕಾರಿ ವಿದ್ಯಾಮಾನಗಳ ಬಗೆಗೆ ಆತಂಕ ವ್ಯಕ್ತಪಡಿಸುವುದು. ಸರ್ಕಾರದ ಹೊಣೆಯನ್ನು ನೆನಪಿಸುವುದು, ವೈಫಲ್ಯವನ್ನು ಟೀಕಿಸುವುದು ಅತ್ಯಂತ ಅವಶ್ಯಕ. ಇಂತಹ ಟೀಕೆ ಬಂದಾಗ ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿರುವವರು ಚರ್ಚ,ಮಸೀದಿ, ದೇವಸ್ಥಾನಗಳ ಮೇಲೆ ದಾಳಿ ಮಾಡುವವರ ಕೈ ಕಡಿಯಿರಿ ಎನ್ನುವುದು ಜವಾಬ್ದಾರಿಯುತವಾದ ನಡವಳಿಕೆಯೇ?