ಬೆಂಗಳೂರು,ಜನವರಿ 15:ಶತಮಾನದ ಸುದೀರ್ಘ ಸೂರ್ಯ ಗ್ರಹಣ ರಾಜಧಾನಿ ಐಟಿ ನಗರಿಗೂ ವ್ಯಾಪಿಸಿದ್ದು, ಆಡಳಿತ ಯಂತ್ರ ಹಾಗೂ ಸಾಮಾನ್ಯ ಜನ ಜೀವನಕ್ಕೂ ಗ್ರಹಣ ಹಿಡಿದಿತ್ತು. ಗ್ರಹಣದ ಹಿನ್ನೆಲೆಯಲ್ಲಿ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದರೆ ಸರ್ಕಾರಿ ಕಾಲೇಜುಗಳಲ್ಲಿ ಹಾಜರಾತಿ ಇರಲಿಲ್ಲ. ಸರ್ಕಾರಿ ಕಚೇರಿಗಳಿಗೆ ಗ್ರಹಣ ಹಿಡಿದಿತ್ತು. ಬಹುತೇಕ ಸರ್ಕಾರಿ ನೌಕರರು ಮನೆ ಬಿಟ್ಟು ಹೊರಗೆ ಕಾಲಿಡಲಿಲ್ಲ.
ಸದಾ ಜನಜಂಗಳಿ ಹಾಗೂ ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ರಸ್ತೆಗಳೂ ಖಾಲಿ ಖಾಲಿಯಾಗಿಯಾಗಿದ್ದವು. ನಗರದ ವೃತ್ತಗಳಲ್ಲಿ ಸಂಚಾರಿ ಪೊಲೀಸರೂ ಕೂಡ ಕಾಣೆಯಾಗಿದ್ದರು. ಬಿಎಂಟಿಸಿ ಬಸ್ ಸಂಚಾರ ಪೂರ್ಣ ಪ್ರಮಾಣದಲ್ಲಿದ್ದರೂ, ಪ್ರಯಾಣಿಕರ ಸಂಖ್ಯೆ ಭಾರಿ ಕಡಿಮೆ, ಖಾಲಿ ಬಸ್ಗಳ ಸಂಚಾರ ಎಲ್ಲೆಡೆ ಕಂಡು ಬಂದವು. ದೇವಸ್ತಾನಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಹೋಟೆಲ್ಗಳಲ್ಲಿ ಊಟ ಸಿಗದೇ ಜನತೆ ಪರದಾಡಿದ್ದು ಸಾಮಾನ್ಯವಾಗಿತ್ತು.
ಆಟೋಗಳು ಸಹ ಹೆಚ್ಚಾಗಿ ರಸ್ತೆಗೆ ಇಳಿದಿರಲ್ಲ. ದ್ವಿಚಕ್ರವಾಹನ ಸಂಚಾರ ಕಡಿಮೆ ಇತ್ತು. ಬ್ಯಾಂಕುಗಳ ವಹಿವಾಟು ಸ್ಥಗಿತವಾಗಿತ್ತು, ಗ್ರಾಹಕರ ಬರುವಿಕೆಗಾಗಿ ನೌಕರರು ಕಾದು ಕುಳಿತಿದ್ದರು.
ಗ್ರಹಣ ವೀಕ್ಷಿಸಲು ನಗರದ ನೆಹರು ತಾರಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳ ಉತ್ಸಾಹವಂತೂ ಮೇರೆ ಮೀರಿತ್ತು. ಯುವಕರು, ವೃದ್ಧರಾದಿಯಾಗಿ ಜನಸ್ತೋಮವೇ ಅಲ್ಲಿ ಜಮಾಯಿಸುತ್ತು. ವಿಜ್ಞಾನಿಗಳ ಕುತೂಹಲಕ್ಕೆ ಪಾರವೇ ಇರಲಿಲ್ಲ.
ಸೌರ್ಯಮಂಡಲದಲ್ಲಿನ ವಿಸ್ಮಯದ ಸೂರ್ಯ ಗ್ರಹಣವನ್ನು ನಗರ ಜನತೆ ನೋಡಿ ಪುಳುಕಿತರಾದರು. ಇಂತಹದೇ ಖಗ್ರಾಸ ಸೂರ್ಯ ಗ್ರಹಣ 2019 ರಲ್ಲಿ ಗೋಚರವಾಗಲಿದೆ ಎಂದು ತಾರಾಲಯದ ವಿಜ್ಞಾನಿಗಳು ಹೇಳಿದ್ದಾರೆ.