ಭಟ್ಕಳ:ತಾಲೂಕಿನ ಬಸ್ತಿಮಕ್ಕಿಯಲ್ಲಿರುವ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನದಲ್ಲಿ ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘ ಇದರ ದಶಮಾನೋತ್ಸವ ಕಾರ್ಯಕ್ರಮವನ್ನು ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಇವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಹತ್ತು ವರ್ಷಗಳ ಕಾಲ ಈ ಸಂಘಟನೆಯು ಮಾದರಿಯಾಗಿ ಬೆಳೆದು ಬಂದಿದ್ದು ಮಹಾಗಣಪತಿಯ ಕೃಪೆಯಿಂದ ಉತ್ತಮವಾಗಿ ಕಾರ್ಯನಿವಹಿಸುತ್ತಿದೆ ಎಂದರು.
ಹವ್ಯಕರು ತೋರಿಕೆಗೆ ಸಂತಸದಿದ ಇದ್ದಂತೆ ಕಂಡರೂ ಕೂಡಾ ಆಂತರಿಕವಾಗಿ ನಾನು ಸಂತೋಷವಾಗಿದ್ದೇಯೇ ಎನ್ನುವುದನ್ನು ಪ್ರಶ್ನಿಸಿಕೊಳ್ಳುವಂತಾಗಿದೆ. ಹವ್ಯಕ ಪ್ರತಿಭೆಗಳು ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಗೆ ಹೋಗುತ್ತಿರುವುದರಿಮ್ದ ನಾವು ನಮ್ಮತನವನ್ನು ಮರೆತಿದ್ದೇವೆ. ಇದು ಮುಂದಿನ ತಲೆಮಾರಿಗೆ ತೊಂದರೆಯಾಗುವ ಲಕ್ಷಣಗಳಿವೆ ಎಂದು ಎಚ್ಚರಿಸಿದರು. ಜೀವನದಲ್ಲಿ ತಾಳ್ಮೆ ಮುಖ್ಯ ಎಂದ ಅವರು ನಮ್ಮ ಯುವ ಪೀಳಿಗೆಯನ್ನು ವ್ಯಾವಹಾರಿಕವಾದ ವಾತಾವರಣದಲ್ಲಿ ಬೆಳೆಸುವ ಅಗತ್ಯತೆ ಇದೆ ಎಂದೂ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ನಿವೃತ್ತ ಯೋಧ ಮಂಜುನಾಥ ವಿ. ಹೆಗಡೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಹವ್ಯಕ ನೌಕರರ ಸಂಘಟನೆ ಹತ್ತು ವರ್ಷಗಳನ್ನು ಪೂರೈಸಿ ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ. ಹವ್ಯಕರು ನಮ್ಮ ಆಚರಣೆ, ಭಾಷೆ, ಅಡುಗೆಯಿಂದಲೇ ಗುರುತಿಸಿಕೊಂಡವರು ನಾವು, ಅವುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ ಎಂದರು. ಇಂದು ನಮ್ಮ ತಂಬಳಿ, ಹಸಿ, ಸಂಡಿಗೆ, ಗೊಜ್ಜುಗಳು ಬಾತ್ಗಳಿಂದಾಗಿ ಮರೆಯಾಗುತ್ತಿದ್ದು ಇದು ದೊಡ್ಡ ಅಪಾಯ ತಂದೊಡ್ಡಬಹುದು ಎಂದು ಎಚ್ಚರಿಸಿದ ಅವರು ನಾವು ನಮ್ಮತನವನ್ನು ಮರೆಯಬಾರದು ಎಂದರು. ಹವ್ಯಕ ಬ್ರಾಹ್ಮಣರು ಹಿಂದಿನಿAದಲೂ ಬಡ ಬ್ರಾಹ್ಮಣರು ಎಂದು ಗುರುತಿಸಿಕೊಂಡು ಬಂದರು ಆದರೂ ಸಹ ನಮ್ಮತನವನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ ಎಂದ ಅವರು ಅದನ್ನು ಮುಂದುವರಿಸಿಕೊAಡು ಹೋಗುವಂತೆಯೂ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ ಅವರು ಮಾತನಾಡಿ ಅಂದು ಸಂಘಟನೆಯ ಸ್ಥಾಪನೆಗೆ ಸಹಕರಿಸಿದವರನ್ನು ನೆನೆದರು. ಬ್ರಾಹ್ಮಣರು ಮೊದಲಿನಿಂದಲೂ ಕೂಡಾ ಸವಾಲನ್ನು ಮೆಟ್ಟಿ ನಿಂತವರು. ನಮ್ಮ ಸಂಘಟನೆಯ ವತಿಯಿಂದ ಯುವ ಪ್ರತಿಭೆಗಳಿಗೆ ವಿವಿಧ ಸ್ಮರ್ಧಾತ್ಮಕ ಪರೀಕ್ಷಾ ತಯಾರಿಯ ಕುರಿತು, ಉನ್ನತ ಶಿಕ್ಷಣದ ಕುರಿತು ಸಹಾಯ ಮಾಡುವ ಇಚ್ಚೆ ಇದ್ದು ಮುಂದಿನ ದಿನಗಳಲ್ಲಿ ನೆರವೇರಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ತಹಸೀಲ್ದಾರ್ ಅಶೋಕ ಎನ್. ಭಟ್ಟ ಹವ್ಯಕರು ಸಂಘಟಿತರಾಗಿ ಪರಸ್ಪರ ಸಹಾಯ ಮಾಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಘದ ಗೌರವ ಮಾರ್ಗದರ್ಶಕರಾದ ಶಂಭು ಎನ್. ಹೆಗಡೆ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಧಾ ಭಟ್ಟ, ಹವ್ಯಕ ವಲಯದ ಅಧ್ಯಕ್ಷೆ ರೇಶ್ಮಾ ಭಟ್ಟ, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ, ಹಿರಿಯರಾದ ಎಂ.ವಿ.ಹೆಗಡೆ ಉಪಸ್ಥಿತರಿದ್ದರು.
ಇದೇ ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿಯಲ್ಲಿ ಶ್ರೀಧರ ಹೆಬ್ಬಾರ್, ವೈಧಿಕರಾದ ನೀಲಕಂಠ ಉಪಾಧ್ಯಾಯ, ಸಮಾಜ ಸೇವೆಯಲ್ಲಿ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ, ಸಂಗೀತದಲ್ಲಿ ಸುಬ್ರಹ್ಮಣ್ಯ ಹೆಗಡೆ, ಸಾಹಿತ್ಯದಲ್ಲಿ ವೆಂಕಟ್ರಮಣ ಹೆಗಡೆ (ಯೋಗೀಶ) ಇವರುಗಳನ್ನು ಸನ್ಮಾನ ಪತ್ರ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಸೀತಾ ಹೆಗಡೆ ಸ್ವಾಗತಿಸಿದರು. ಗಣೇಶ ಹೆಗಡೆ ಸ್ವಾಗತಿಸಿದರು. ಕೆ.ಬಿ. ಹೆಗಡೆ ವರದಿ ವಾಚಿಸಿದರು. ಕೆ.ಬಿ.ಹೆಗಡೆ ಹಾಗೂ ಐ.ವಿ. ಹೆಗಡೆ ನಿರ್ವಹಿದರು. ಗಣಪತಿ ಶಿರೂರು ವಂದಿಸಿದರು.
ನಂತರ ನಡೆದ ಮನರಂಜನಾ ಕಾರ್ಯಕ್ರಮ ಯಕ್ಷ ನೃತ್ಯ ಗಾನ ಹಾಸ್ಯ ವೈಭವದಲ್ಲಿ
ಚಿಂತನಾ ಹೆಗಡೆ ಮಾಳಕೋಡ ಅವರ ಭಾಗವತಿಕೆ, ಗಜಾನನ ಭಂಡಾರಿ ಕೆರೆಕೋಣ ಅವರ ಮೃದಂಗ, ಸುಬ್ರಹ್ಮಣ್ಯ ಭಂಡಾರಿ ಗುಣವಂತೆ ಅವರ ಚಂಡೆವಾದನ ಹಾಗೂ ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಕಾಸರಕೋಡ, ಲೋಕೇಶ ನಾಯ್ಕ ಗುಣವಂತೆ, ಮಾರುತಿ ಬೈಲಗದ್ದೆ ಇವರ ನೃತ್ಯ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವೀಯಾಯಿತು.