ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ದಲಿತ ದೌರ್ಜನ್ಯದ ಎರಡು ಪ್ರಕರಣಗಳು ರವಿವಾರ ವರದಿಯಾಗಿವೆ. ಗುಜರಾತ್ನ ತಾಪಿ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರನ್ನು ತಲೆ ಬೋಳಿಸಿ, ಆಕೆಯನ್ನು ಅರೆನಗ್ನಗೊಳಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಉತ್ತರಪ್ರದೇಶದಲ್ಲಿ ದಲಿತ ಬಾಲಕನಿಗೆ ಮೂತ್ರ ಕುಡಿಯುವಂತೆ ಬಲವಂತಪಡಿಸಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ದೇಶಾದ್ಯಂತ ರವಿವಾರ ಸಂವಿಧಾನ ದಿನವನ್ನು ಆಚರಿಸುತ್ತಿರುವಾಗಲೇ ಈ ಅಮಾನವೀಯ ಪ್ರಕರಣಗಳು ವರದಿಯಾಗಿರುವುದು ಅಘಾತಕಾರಿಯಾಗಿದೆ.
ಉ.ಪ್ರ.: ದಲಿತ ಬಾಲಕನಿಗೆ ಥಳಿಸಿ ಮೂತ್ರ ಸೇವಿಸುವಂತೆ ಬಲವಂತ:
ಲಕ್ನೋ: ದಲಿತ ಬಾಲಕನಿಗೆ ಪ್ರಬಲ ಜಾತಿಯ ಜನರ ಗುಂಪೊಂದು ಥಳಿಸಿದ ಹಾಗೂ ಮೂತ್ರ, ಮಣ್ಣು ಸೇವಿಸುವಂತೆ ಬಲವಂತಪಡಿಸಿದ ಘಟನೆ ಉತ್ತರಪ್ರದೇಶದ ಚೌನ್ಪುರ ಜಿಲ್ಲೆಯ ಶೇಕ್ಪುರ ಖುಟಹಾನಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಟೌನ್ಪುರದ ಪೊಲೀಸ್ ಅಧೀಕ್ಷಕ ಅಜಯ್ ಪಾಲ್ ಶರ್ಮಾ ಅವರು ಮಧ್ಯಪ್ರವೇಶಿಸಿದ ಬಳಿಕ ಶನಿವಾರ ಸಂಜೆ ಈ ಕುರಿತಂತೆ ಎಫ್ಐಆರ್ ದಾಖಲಿಸಲಾಗಿದೆ. ತಾನು ಸುಜಾನ್ ಗಂಜ್ ಪೊಲೀಸರನ್ನು ಗುರುವಾರ ಸಂಜೆ ಸಂಪರ್ಕಿಸಿದ್ದೆ. ಆದರೆ, ಅವರು ತನ್ನ ದೂರು ದಾಖಲಿಸಿಕೊಳ್ಳಲಿಲ್ಲ. ಆದುದರಿಂದ ತಾನು ಚೌನ್ಪುರ ಪೊಲೀಸ್ ಅಧೀಕ್ಷಕರನ್ನು ಭೇಟಿಯಾದೆ ಹಾಗೂ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ. ತನ್ನ ಪುತ್ರ ಆಮಿ ಪ್ರದೇಶದಿಂದ ಗುರುವಾರ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಆತನನ್ನು ಸೆರೆ ಹಿಡಿದರು ಹಾಗೂ ಥಳಿಸಿದರು. ಆನಂತರ ಮೂತ್ರ ಹಾಗೂ ಮಣ್ಣು ಸೇವಿಸುವಂತೆ ಬಲವಂತಪಡಿಸಿದರು. ಆತನ ಹುಬ್ಬನ್ನು ಬೋಳಿಸಿದರು ಎಂದು ದಲಿತ ಬಾಲಕನ ತಂದೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ದುಷ್ಕರ್ಮಿಗಳು ಅಲ್ಲಿಂದಲೇ ತನಗೆ ಕರೆ ಮಾಡಿದರು ಹಾಗೂ ಈ ಘಟನೆಯನ್ನು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಒಡ್ಡಿದ ಬಳಿಕ ಪುತ್ರನನ್ನು ಕರೆದುಕೊಂಡು ಹೋಗಲು ಅವಕಾಶ ನೀಡಿದರು ಎಂದು ಅವರು ತಿಳಿಸಿದ್ದಾರೆ.
ದಲಿತ ಬಾಲಕನ ದೂರಿನ ಆಧಾರದಲ್ಲಿ ಆತನ ಗ್ರಾಮದ ಇಬ್ಬರು ವ್ಯಕ್ತಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 323, 504, 506ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ'' ಎಂದು ಬದ್ಲಾಪುರ ಸರ್ಕಲ್ ಆಫೀಸರ್ ಎ.ಕೆ. ಸಿಂಗ್ ತಿಳಿಸಿದ್ದಾರೆ. ಈ ನಡುವೆ ಬಾಲಕನಿಗೆ ಥಳಿಸಿದ ವ್ಯಕ್ತಿಗಳು ಕೂಡ ಪೊಲೀಸರನ್ನು ಸಂಪರ್ಕಿಸಿದ್ದಾರೆ ಹಾಗೂ ಬಾಲಕ ತಮ್ಮ ಕುಟಂಬದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಅವರ ದೂರಿನ ಆಧಾರದಲ್ಲಿ ಪೊಲೀಸರು ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.
ಗುಜರಾತ್: ಬುಡಕಟ್ಟು ಮಹಿಳೆಯ ತಲೆ ಬೋಳಿಸಿ, ನಗ್ನಗೊಳಿಸಿ ಹಲ್ಲೆ:
ಅಹ್ಮದಾಬಾದ್: ಗುಜರಾತ್ನ ತಾಪಿ ಜಿಲ್ಲೆಯ ವ್ಯಾರಾ ಪಟ್ಟಣದಲ್ಲಿ ವಾಸಿಸುತ್ತಿರುವ ವಿಚ್ಛೇದಿತ ಬುಡಕಟ್ಟು ಮಹಿಳೆಯನ್ನು ಮೇಲ್ವಾತಿಗೆ ಸೇರಿದ ಜನರು ನಡುರಸ್ತೆಯಲ್ಲೇ ಅಪಹರಿಸಿ, ತಲೆ ಬೋಳಿಸಿ ಹಾಗೂ ಅರೆನಗ್ನಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
26 ವರ್ಷದ ಮಹಿಳೆ 8 ವರ್ಷದ ಹಿಂದೆ ವಿಚ್ಛೇದಿತಳಾಗಿದ್ದಳು ಹಾಗೂ ತನ್ನ ಪುತ್ರನೊಂದಿಗೆ ಇಲ್ಲಿ ವಾಸಿಸುತ್ತಿದ್ದಳು. ಒಂದೂವರೆ ವರ್ಷಗಳ ಹಿಂದೆ ಆಕೆ ಬೊರಖಾಡಿ ಗ್ರಾಮದ ನಿವಾಸಿಯಾಗಿರುವ ನೀರವ್ ಚೌಧರಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇಬ್ಬರೂ ವ್ಯಾರಾ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಒಟ್ಟಾಗಿ ಜೀವಿಸಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಚೌಧರಿ ಹೆತ್ತವರು ಹಾಗೂ ಸಂಬಂಧಿಕರು ಈ ಸಂಬಂಧದ ಬಗ್ಗೆ ಹಾಗೂ ಅವರು ಒಟ್ಟಾಗಿ ಜೀವಿಸುತ್ತಿರುವ ಈ ಬಗ್ಗೆ ಅಸಮಾಧಾನಗೊಂಡಿದ್ದರು. ಪೊಲೀಸ್ ದೂರಿನ ಪ್ರಕಾರ ಆಕೆ ಬುಧವಾರ ಅಪರಾಹ್ನ ಚೌಧರಿ ಹಾಗೂ ತನ್ನ ಗೆಳತಿ ಪ್ರೀತಿಕಾಬೆನ್ನೊಂದಿಗೆ ಕೆಲವು ವೈಯಕ್ತಿಕ ಕೆಲಸಕ್ಕಾಗಿ ಬುಹಾರಿ ಗ್ರಾಮಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಳು. ಆದರೆ, ಅವರು ಕಪುರಾ ಸ್ಮಾರ್ ಸಮೀಪದ ಗ್ರಾಮಕ್ಕೆ ತೆರಳುತ್ತಿದ್ದಾಗ ಕಪುರಾ ಸ್ಕ್ಯಾರ್ ಸಮೀಪ ಚೌಧರಿಯ ಹೆತ್ತವರಾದ ಸುನಿತಾಬೆನ್, ಅಜಿತ್ಭಾಯಿ, ಸ್ನೇಹಲ್ಭಾಯಿ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿ ತಡೆದು ನಿಲ್ಲಿಸಿದ್ದರು. ಅವರೆಲ್ಲರೂ ಮೋಟಾರು ಸೈಕಲ್ನಲ್ಲಿ ಆಗಮಿಸಿದ್ದರು.
ಸುನಿತಾಬೆನ್ ಹಾಗೂ ಅಜಿತ್ಭಾಯಿ ಅಲ್ಲಿಂದ ತಮ್ಮ ಪುತ್ರನನ್ನು ಕರೆದುಕೊಂಡು ತೆರಳಿದರು. ಸ್ನೇಹಲ್ಭಾಯಿ ಹಾಗೂ ನಾಲ್ಕನೇ ವ್ಯಕ್ತಿ ಮಹಿಳೆಗೆ ತಮ್ಮೊಂದಿಗೆ ಬರುವಂತೆ ತಿಳಿಸಿದರು ಹಾಗೂ ವ್ಯಾರಾದಲ್ಲಿರುವ ಆಕೆಯ ಮನೆಗೆ ಹಿಂದೆ ಕರೆದುಕೊಂಡು ಬಿಡುವುದಾಗಿ ಭರವಸೆ ನೀಡಿದರು. ಆದರೆ, ಇಬ್ಬರೂ ಆಕೆಯನ್ನು ಚೌಧರಿ ಅವರ ಹೆತ್ತವರು ಈಗಾಗಲೇ ಕಾಯುತ್ತಿರುವ ಖುಶಾಲ್ಪುರ ಗ್ರಾಮಕ್ಕೆ ಕರೆದೊಯ್ದರು. ಚೌಧರಿ ಹೆತ್ತವರು ಆಕೆಯನ್ನು ಕೂಡಲೇ ಹಿಡಿದುಕೊಂಡರು ಹಾಗೂ ಪೊದೆಯೊಂದಕ್ಕೆ ಎಳೆದೊಯ್ದು ದೊಣ್ಣೆಯಿಂದ ಥಳಿಸಿದರು ಹಾಗೂ ನಿಂದಿಸಿದರು.
ಇದಲ್ಲದೆ, ಸುನಿತಾಬೆನ್ ಆಕೆಯ ಕೂದಲು ಕತ್ತರಿಸಿದರು, ಧರಿಸಿದ್ದ ಜೀನ್ಸ್ ಕಳಚಿದಳು ಹಾಗೂ ಆಕೆಯನ್ನು ಗ್ರಾಮದ ರಸ್ತೆಯಲ್ಲೇ ಅರೆ ನಗ್ನಗೊಳಿಸಿದಳು.
ತನ್ನ ಪುತ್ರನನ್ನು ಭೇಟಿಯಾಗುವುದನ್ನು ಮತ್ತೆ ನೋಡಿದರೆ, ಕೊಂದು ಹಾಕಲಾಗುವುದು ಎಂದು ಬೆದರಿಕೆ ಕೂಡ ಒಡ್ಡಿದಳು. ಸಂತ್ರಸ್ತೆ ಮಹಿಳೆ ತನ್ನ ಸಂಕಷ್ಟವನ್ನು ಹೆತ್ತವರಲ್ಲಿ ತೋಡಿಕೊಂಡಿದ್ದಾಳೆ ಹಾಗೂ ತಾನಿರುವ ಸ್ಥಳವನ್ನು ಮೊಬೈಲ್ ಮೂಲಕ ಹೆತ್ತವರಿಗೆ ಕಳುಹಿಸಿ ದ್ದಾಳೆ. ಆನಂತರ ಹೆತ್ತವರು ಆಕೆಯನ್ನು ರಕ್ಷಿಸಿದ್ದಾರೆ. ಸಂತ್ರಸ್ತೆ ಆನಂತರ ವ್ಯಾರಾ ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ ಹಾಗೂ ಚೌಧರಿಯ ಹೆತ್ತವರಾದ ಸುನಿತಾಬೆನ್, ಅಜಿತ್ಬಾಯ್ ಹಾಗೂ ಸ್ನೇಹಲ್ ಬಾಯ್, ಇನ್ನೋರ್ವ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾಳೆ.