ಮಂಗಳೂರು, ನ.೨೦: ಈ ಧರ್ಮದ ಸಾರವನ್ನು ತಿಳಿಹೇಳುವ ಮತ್ತು ಜಗತ್ತಿನಲ್ಲಿ ಶಾಂತಿ ಸೌಹಾರ್ದ ನೆಲೆಗೊಳ್ಳಬೇಕು ಎಂದು ಆಶಿಸುವ ಧರ್ಮಗುರುಗಳ ಮಧ್ಯೆ ಇಲ್ಲದ ವೈಮನಸ್ಸು, ಆ ಧರ್ಮದ ಅನುಯಾಯಿಗಳ ಮಧ್ಯೆ ಯಾಕೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು.
ನಗರದ ಪುರಭವನದಲ್ಲಿ ದ.ಕ. ಜಿಲ್ಲಾ ಧಾರ್ಮಿಕ ಸೌಹಾರ್ದ ಸಮಿತಿ ಶುಕ್ರವಾರ ಆಯೋಜಿಸಿದ್ದ ‘ಸೌಹಾರ್ದ ಸಮಾವೇಶ’ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರು ಸಹಾಯಕ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮಾತನಾಡುತ್ತಾ ‘ಸ್ನೇಹ ಭಾರತ ದೇಶದ ಜೀವಾಳವಾಗಿದೆ. ಅದೇ ಸ್ವಾರ್ಥ ಭಾರತಕ್ಕೆ ಶಾಪವಾಗಿದೆ. ಸ್ವೇಹ ಮತ್ತು ಶಾಂತಿಯನ್ನು ಬಯಸುವ ಇಸ್ಲಾಂ ಧರ್ಮ ಭಾರತಕ್ಕೆ ಕಾಲಿಟ್ಟಾಗ ಇಲ್ಲಿನ ಹಿಂದೂಗಳು ಆತ್ಮೀಯತೆ ಯಿಂದ ಸ್ವಾಗತಿಸಿದ್ದರು.

ಫಾತಿಮಾ ರಿಟ್ರೀಟ್ ಹೌಸ್ನ ನಿರ್ದೇಶಕ ಫಾ.ರೋನಿ ಪ್ರಭು ಎಸ್.ಜೆ. ಮಾತನಾಡಿ, ‘ನಮ್ಮ ಧರ್ಮವೇ ಮೇಲು ಎಂಬ ಭಾವನೆ ಯಾರಿಗೂ ಬೇಡ. ಎಲ್ಲ ಧರ್ಮದ ಸಾರವನ್ನು ಅರಿತುಕೊಳ್ಳಲು ಪ್ರತಿಯೊಬ್ಬನೂ ಮುಂದೆ ಬರಬೇಕು. ಆಗ ಮಾತ್ರ ಒಬ್ಬ ಒಳ್ಳೆಯ ಮುಸಲ್ಮಾನ, ಒಳ್ಳೆಯ ಹಿಂದು, ಒಳ್ಳೆಯ ಕ್ರೈಸ್ತನಾಗಲು ಸಾಧ್ಯ. ಅದಲ್ಲದೆ ಎಲ್ಲರೂ ತಮ್ಮಿಂದಾದ ತಪ್ಪುಗಳಿಗೆ ಪರಸ್ಪರ ಕ್ಷಮೆಯಾಚಿಸುತ್ತಾ ಸಂಘರ್ಷ ತಪ್ಪಿಸಬೇಕು ಎಂದು ನುಡಿದರು.

ವೇದಿಕೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್, ಕೋಶಾಧಿ ಕಾರಿ ಹಾಜಿ ವೈ.ಮುಹಮ್ಮದ್ ಕುಂಞಿ, ಸದಸ್ಯರಾದ ನನ್ ಚಂದ್ರ ಡಿ. ಸುವರ್ಣ, ಝಮೀರ್ ಅಂಬರ್, ಅಬ್ಬಾಸ್ ಹಸನ್ ಹಾಜಿ ಉಪಸ್ಥಿತರಿದ್ದರು.
ಸದಸ್ಯ ಮುಹಮ್ಮದ್ ಕುಂಞಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಡಾ.ಸಿ.ಪಿ. ಹಬೀಬುರ್ರಹ್ಮಾನ್ ಸ್ವಾಗತಿಸಿದರು. ಸದಸ್ಯ ಎಸ್.ವಿ.ಆಚಾರ್ಯ ವಂದಿಸಿದರು.

ಶ್ರೀರಾಮ್ ವೇದ ಗ್ರಂಥ, ಫಾ.ವಿಕ್ಟರ್ ಡಿಸಿಲ್ವ ಬೈಬಲ್, ಮುಹಮ್ಮದ್ ಫರ್ಹಾನ್ ಖುರ್ಆನ್ ಪಠಿಸಿದರು