ಭಟ್ಕಳ, ನವೆಂಬರ್ 1:ತಾಲೂಕು ಆಡಳಿತದ ವತಿಯಿಂದ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿಯವರನ್ನು ವೇದಿಕೆಗೆ ಕರೆಯದಿರುವ ಬಗ್ಗೆ ಪುರಸಭಾ ನೌಕರರ ಸಂಘ ಖಂಡನೆಯನ್ನು ವ್ಯಕ್ತಪಡಿಸಿದೆ.
ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಸಂಘಟನೆಯ ಸದಸ್ಯರುಗಳು, ಪುರಸಭಾ ವ್ಯಾಪ್ತಿಯಲ್ಲಿಯೇ ಕಾರ್ಯಕ್ರಮವನ್ನು ನಡೆಸಲಾಗಿದ್ದು, ವೇದಿಕೆಗೆ ಉಳಿದೆಲ್ಲ ಅಧಿಕಾರಿಗಳನ್ನು ಕರೆಯಲಾಗಿದೆ. ಆದರೆ ಅಗತ್ಯವಾಗಿ ವೇದಿಕೆಯಲ್ಲಿರಬೇಕಾದ ಮುಖ್ಯಾಧಿಕಾರಿಗಳನ್ನು ಕರೆಯದೇ ಅವಮಾನ ಮಾಡಲಾಗಿದೆ ಎಂದು ಆಪಾದಿಸಲಾಗಿದೆ. ಈ ಕುರಿತು ಅಸಮಾಧಾನವನ್ನು ಹೊರ ಹಾಕಿರುವ ಮುಖ್ಯಾಧಿಕಾರಿ ಕೃಷ್ಣಪ್ಪ, ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಹುದ್ದೆಗೆ ಅರ್ಹ ಗೌರವ ಸಿಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.