ಬಳ್ಳಾರಿ, ಮಾ.೧೧-(ಕರ್ನಾಟಕ ವಾರ್ತೆ) ಹೊಸಪೇಟೆ ತಾಲ್ಲೂಕಿನ ರೈತರಿಗೆ ಸಮರ್ಪಕವಾಗಿ ರಸಗೊಬ್ಬರವನ್ನು ವಿತರಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ೨೬೦೦ ಮೆಟ್ರಿಕ್ ಟನ್ ರಸಗೊಬ್ಬರವನ್ನು ಇಫ್ಕೋ ಸಂಸ್ಥೆಯ ಮುಖಾಂತರ ಕಳುಹಿಸಿದೆ.
ಈ ಸಂಸ್ಥೆಯೇ ಈ ರಸಗೊಬ್ಬರವನ್ನು ಹೊಸಪೇಟೆಯಲ್ಲಿರುವ ವಿವಿಧ ಗೋದಾಮುಳಿಗೆ ಸರಬರಾಬು ಮಾಡಬೇಕಿದೆ. ಐದು ದಿನಗಳಿಗಿಂತ ಮೊದಲೇ ಈ ರಸಗೊಬ್ಬರ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಈ ರಸಗೊಬ್ಬರವನ್ನು ಇಫ್ಕೋ ಸಂಸ್ಥೆ ಹಾಗೂ ಇಫ್ಕೋ ಸಂಸ್ಥೆಯ ಸಾಗಾಣಿಕೆ ಗುತ್ತಿಗೆದಾರರೇ ಸಂಬಂಧಿಸಿದ ಗೋದಾಮುಗಳಿಗೆ ಸರಬರಾಜು ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹೊಸಪೇಟೆ ಶಾಖೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಯುವ ವಿಜ್ಞಾನಿ ಪ್ರಶಸ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ’ಯುವ ವಿಜ್ಞಾನಿ-೧೦’ರ ಪ್ರಶಸ್ತಿ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿ.ಎಸ್.ಇ.ಆರ್.ಟಿ. ವತಿಯಿಂದ ಏರ್ಪಡಿಸಿದರುವ ವಿಜ್ಞಾನಗೋಷ್ಠಿ, ವಿಜ್ಞಾನ ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ ಬಾಲವಿಜ್ಞಾನ ಪ್ರಶಸ್ತಿ, ವಿಜ್ಞಾನ ನಾಟಕ, ಎಸ್.ಟಿ.ಎಸ್.ಇ. ಪರೀಕ್ಷೆಯ ಫಲಿತಾಂಶ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ಸರ್ಕಾರ ಹಾಗೂ ಮತ್ತಿತರ ಸಂಘ ಸಂಸ್ಥೆಗಳಿಂದ ವಿಜ್ಞಾನಕ್ಕೆ ಸಂಬಂಧಿಸಿದಂತೆ ೨೦೦೭-೦೮, ೨೦೦೮-೦೯ನೇ ಸಾಲಿನಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಪಡೆದ ಪ್ರಶಸ್ತಿಗಳನ್ನು ಪರಿಗಣಿಸಿ ಯುವ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ೧೫ ರಿಂದ ೧೮ ವರ್ಷ ವಯೋಮಿತಿಯೊಳಗಿನ
ಪ್ರೌಢಶಾಲಾ / ಪದವಿಪೂರ್ವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಆಸಕ್ತರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಮುಖ್ಯ ಗುರುಗಳು/ಪ್ರಾಚಾರ್ಯರಿಂದ ದೃಢೀಕರಿಸಿ ಮಾರ್ಚ್ ೨೫ರೊಳಗಾಗಿ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬಳ್ಳಾರಿ ಇವರಿಗೆ ಸಲ್ಲಿಸಬಹುದಾಗಿದೆ.