ಬೆಂಗಳೂರು, ಏಪ್ರಿಲ್ ೨೪,೧೦೮ ಆರೋಗ್ಯ ಕವಚ ಆಂಬುಲೆನ್ಸ್ ಎಮೆರ್ಜೆನ್ಸಿ ಸೇವೆಯಲ್ಲಿರುವ ಸಿಬ್ಬಂದಿ ಕಳೆದ ರಾತ್ರಿಯಿಂದ ಮುಷ್ಕರ ಹೂಡಿದ್ದು ಈ ಸಂಬಂಧ ಸರ್ಕಾರವು ಬದಲಿ ವ್ಯವಸ್ಥೆಗೆ ಕ್ರಮಕೈಗೊಂಡಿದೆಯೆಂದು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಇ.ವಿ. ರಮಣರೆಡ್ಡಿ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಆರೋಗ್ಯ ಕವಚ ಯೋಜನೆಯ ಕಾರ್ಯನಿರ್ವಹಣೆಯನ್ನು ಜಿವಿಕೆಇಎಂಆರ್ಐ ಸಂಸ್ಥೆಗೆ ವಹಿಸಲಾಗಿದ್ದು, ಆ ಸಂಸ್ಥೆಯು ಅಂಬುಲೆನ್ಸ್ ಸೇವೆಯಲ್ಲಿರುವ ಹಲವಾರು ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷಧೋರಣೆ, ದುರ್ವರ್ತನೆ ಕಾರಣಕ್ಕಾಗಿ ಶಿಸ್ತಿನ ಕ್ರಮ ಜರುಗಿಸಿದೆ, ಸರ್ಕಾರ ಆ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ಸಿಬ್ಬಂದಿ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಹೂಡಿದ್ದಾರೆ.
ಖಾಸಗಿ ವಾಹನ ಚಾಲಕರು, ನರ್ಸಿಂಗ್ ಕಾಲೇಜಿನ ನರ್ಸ್ಗಳನ್ನು ಬಳಕೆ ಮಾಡಿ ಆಂಬುಲೆನ್ಸ್ ಸೇವೆ ಮುಂದುವರೆಸುವಂತೆ ಜಿಲ್ಲಾಧಿಕಾರಿಗಳಿಗೆ ವಿಡಿಯೋ ಕಾನ್ಪರೆನ್ಸ್, ಮುಖಾಂತರ ತಿಳಿಸಲಾಗಿದೆ. ಸಿಬ್ಬಂದಿ ಬೇಡಿಕೆ ಕುರಿತು ಪರಿಗಣಿಸಲು ನಿರ್ವಹಣಾ ಸಂಸ್ಥೆಗೆ ತಿಳಿಸಲಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗಿದೆಯೆಂದು ತಿಳಿಸಿದ ಕಾರ್ಯದರ್ಶಿಗಳು ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದರು.