ಭಟ್ಕಳ, ಅಕ್ಟೋಬರ್ 31 : ದೇಶದ ಯುವ ಜನತೆಯ ಕಣ್ಮಣಿ, ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಫೆಬ್ರುವರಿ ಕೊನೆಯ ವಾರದಲ್ಲಿ ಭಟ್ಕಳಕ್ಕೆ ಭೇಟಿ ನೀಡಲಿದ್ದಾರೆ.
ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ 90ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಭಟ್ಕಳಕ್ಕೆ ಆಗಮಿಸುತ್ತಿದ್ದು, ಅವರು ಭಾಗವಹಿಸುವ ಉಳಿದ ಕಾರ್ಯಕ್ರಮಗಳ ಪಟ್ಟಿ ಇನ್ನಷ್ಟೇ ಸಿದ್ದಗೊಳ್ಳಬೇಕಿದೆ. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಖಲೀಲ್-ಉ-ರೆಹಮಾನ್ರವರು ಅಬ್ದುಲ್ ಕಲಾಂ ಆಗಮನದ ವಿಷಯವನ್ನು ಘೋಷಿಸಿದ್ದು, ಭಟ್ಕಳಕ್ಕೆ ಭೇಟಿ ನೀಡುವ ಕುರಿತಂತೆ ಕಲಾಂ ಒಪ್ಪಿಗೆ ಸೂಚಿಸಿದ್ದಾರೆ. ದಿನಾಂಕ ನಿಗದಿಗಾಗಿ ಚರ್ಚೆ ನಡೆದಿದ್ದು, ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ ಪ್ರಥಮ ವಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದ್ದಾರೆ.
ಈಗಾಗಲೇ ಸ್ಟಾರ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ ಭಟ್ಕಳ ಭೇಟಿಯ ಸಿಹಿ ಆರುವ ಮುನ್ನವೇ ಮತ್ತೋರ್ವ ಸ್ಟಾರ್ ವ್ಯಕ್ತಿಯೋರ್ವರು ಭಟ್ಕಳದತ್ತ ಹೆಜ್ಜೆ ಹಾಕಲು ಒಪ್ಪಿರುವುದು ಇಲ್ಲಿಯ ಜನರಲ್ಲಿ ಸಂಚಲನ ಮೂಡಿಸಿದೆ.