ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆಯಲ್ಲಿ ಟೆಂಪೋ ಚಾಲಕರು ಮತ್ತು ಸಹಾಯಕರಿಗಾಗಿ ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತಾ ನಿಯಮ ಕುರಿತು ಬುಧವಾರ ಕಾರ್ಯಗಾರ ನಡೆಯಿತು.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಬರ್ಮಪ್ಪ ಬೆಳಗಲಿ, ರಸ್ತೆ ನಿಯಮಗಳು ಮತ್ತು ಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಶಾಲಾ ಟೆಂಪೋ ಚಾಲಕರು ಮತ್ತು ಸಹಾಯಕರಿಗೆ ಮಾಹಿತಿ ನೀಡಿದರು. ವೆಲ್ಫೇರ್ ಆಸ್ಪತ್ರೆಯ ಡಾ.ಶಾಕಿಯಾ ಹಾಗೂ ಆಸ್ಪತ್ರೆಯ ಸಿಸ್ಟರ್ ಪ್ರಥಮ ಚಿಕಿತ್ಸೆ ಮತ್ತು ತರ್ತು ಸ್ಥಿತಿಯ ಸಂದರ್ಭದಲ್ಲಿ ಏನೆಲ್ಲ ಕ್ರಮಗಳನ್ನು ಜರುಗಿಸಬೇಕು ಎಂಬುದರ ಕುರಿತಂತೆ ಪ್ರಾಯೋಗಿಕವಾಗಿ ಪ್ರತ್ಯಾಕ್ಷಿಕತೆಯ ಮೂಲಕ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ, ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಎಷ್ಟುಮುಖ್ಯವೋ ಅವರ ಸುರಕ್ಷತೆಯ ಬಗ್ಗೆ ಜಾಗರೂಕತೆ ವಹಿಸುವುದು ಅಷ್ಟೇ ಮುಖ್ಯ ಎಂದರು. ಹಿರಯ ಶಿಕ್ಷಕ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಸಂಸ್ಥೆಯ ಉಪಾಧ್ಯಾಕ್ಷ ಸೈಯ್ಯದ್ ಖುತುಬ್ ಬರ್ಮಾವರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಬರ್ಮಪ್ಪ ಬೆಳಗಲಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.