ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಸತಿ ರಹಿತರಿಗೆ ಮನೆ ಮಂಜೂರು : ಸತೀಸ್ ಸೈಲ್

ವಸತಿ ರಹಿತರಿಗೆ ಮನೆ ಮಂಜೂರು : ಸತೀಸ್ ಸೈಲ್

Sat, 02 Mar 2024 01:14:03  Office Staff   SOnews

ಕಾರವಾರ : ಗ್ರಾಮ ಪಂಚಾಯತಗಳಲ್ಲಿನ ವಸತಿ ರಹಿತ ಫಲಾನುಭವಿಗಳ ಪಟ್ಟಿ ಮಾಡಿ ಪಂಚಾಯತಿಯಲ್ಲಿ ಠರಾವು ಮಾಡಿ, ವರದಿಯನ್ನು ನೀಡಿದಲ್ಲಿ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಸುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ ಸೈಲ್ ಹೇಳಿದರು.

ಅವರು ಇಂದು ಜಿಲ್ಲಾ ರಂಗಮAದಿರದಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ವತಿಯಿಂದ ಆಯೋಜಿಸಿದ್ದ, ಬಸವ ವಸತಿ ಯೋಜನೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಕಾರವಾರ ತಾಲೂಕಿನ 18 ಗ್ರಾಮ ಪಂಚಾಯತಗಳಲ್ಲಿ, ಬಸವ ಯೋಜನೆಯಡಿ 486 ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 13 ಸೇರಿದಂತೆ ಒಟ್ಟು 499 ಫಲಾನುಭವಿಗಳು 2022-23 ನೇ ಸಾಲಿನಲ್ಲಿ ಆಯ್ಕೆಯಾಗಿದ್ದು, ಆಯ್ಕೆಯಾಗಿರುವ ಎಲ್ಲಾ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಹಂತ ಹಂತವಾಗಿ ಸಹಾಯಧನ ಬಿಡುಗಡೆಯಾಗಲಿದ್ದು, ಬಹುದಿನಗಳ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ಸಾಕಾರಗೊಳಿಸಿಕೊಳ್ಳುವಂತೆ ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಬಡ ಜನರಿಗೆ ವಸತಿ ಯೋಜನೆಯಡಿ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದ ಅವರು, ಅಭಿವೃದ್ಧಿ ಹಾಗೂ ಬಡ ಜನರ ಕೆಲಸಗಳನ್ನು ಮಾಡುವಾಗ ಪಕ್ಷಬೇಧ ಮರೆತು ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಅಹವಾಲು ಆಲಿಸಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವ ಮುನೋಭಾವ ಬೆಳಸಿಕೊಳ್ಳಬೇಕು. ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಕುಡಿಯುವ ನೀರು, ರಸ್ತೆ, ಸ್ಮಶಾನ ಭೂಮಿ ಒದಗಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಇಒ ಈರಣ್ಣಗೌಡ, ವಿವಿಧ ಗ್ರಾಮ ಪಂಚಾಯತಗಳ ಅಧ್ಯಕ್ಷರು, ಉಪಾಧ್ಯಕ್ಷರು ವಿವಿಧ ಗ್ರಾಮಗಳ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.


Share: