ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Mon, 05 Aug 2024 02:36:18  Office Staff   S O News

ಮೈಸೂರು: ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 200 ಕಿಮೀ ರಸ್ತೆ ಮಾರ್ಗದುದ್ದಕ್ಕೂ ನಾನಾ ರಸ್ತೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹೊಸ ರಸ್ತೆ ಕಾಮಗಾರಿಗಳ ಪ್ರಗತಿ, ರಸ್ತೆ ಗುಂಡಿಗಳ ಬಗ್ಗೆ, ಉದ್ದೇಶಿತ ಯೋಜನೆಗಳ ಸ್ಥಿತಿ -ಗತಿಗಳ ಬಗ್ಗೆ ದೂರವಾಣಿ ಮೂಲಕವೇ ಮಾಹಿತಿ ಪಡೆದರು.

ಮುಖ್ಯಮಂತ್ರಿಗಳ ಕಾರು ಬಿಳಿಕೆರೆ ಕ್ರಾಸ್ ಸಮೀಪಿಸುತ್ತಿದ್ದಂತೆ ಬಿಳಿಕೆರೆ ಕ್ರಾಸ್ ನಿಂದ ಯಡಗೊಂಡನಹಳ್ಳಿ ವರೆಗಿನ 41ಕಿಮೀ ಉದ್ದದ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ಪಡೆದರು. 600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂತು.  ಮಾರ್ಗದಲ್ಲಿ ಅಲ್ಲಲ್ಲಿ ಕಾಣಿಸಿದ ರಸ್ತೆ ಗುಂಡಿಗಳಿಗೆ ಗರಂ ಆದ ಮುಖ್ಯಮಂತ್ರಿಗಳು, ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಳೆ ಇಲ್ಲದ ಸಮಯ ನೋಡಿಕೊಂಡು ಗುಂಡಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.

ಹೊಳೆ ನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಮಾರ್ಗವಾಗಿ ಸಾಗಿತ್ತಿದ್ದಂತೆ ಅಪಾಯದ ಸೂಚನೆ ನೀಡುತ್ತಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವೈರ್‍ಗಳನ್ನು ದುರಸ್ತಿಗೊಳಿಸುವಂತೆ  ಹಾಗೂ ಹಳ್ಳಿ ಮೈಸೂರು ಹಾದು ಹೋಗುವಾಗ ಹಾಳಾಗಿದ್ದ ರಸ್ತೆ ವಿಭಜಕಗಳನ್ನು ಗುರುತಿಸಿ ಸರಿ ಪಡಿಸಲು ಸೂಚನೆ ನೀಡಿದರು.

ಮಾರ್ಗದುದ್ದಕ್ಕೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಲು ಹಾರ ತುರಾಯಿ, ಶಾಲುಗಳ ಸಮೇತ ಅಲ್ಲಲ್ಲಿ ಕಾದಿದ್ದವರಿಗೆ, ಯಾವುದನ್ನೂ ಸ್ವೀಕರಿಸದ ಸಿಎಂ, ನಾನು ಹುಟ್ಟು ಹಬ್ಬ ಆಚರಿಸಲ್ಲ ಎಂದು ಕೈ ಬೀಸಿ, ಕೈ ಮುಗಿದು ಮುಂದೆ ಸಾಗಿದರು.


Share: