ಹಾಸನ, ಡಿಸೆಂಬರ್ 15: ಆಪರೇಷನ್ ಕಮಲದ ಹುಬ್ಬಿನಿಂದ ಬೀಗುತ್ತಿರುವ ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡುವಷ್ಟು ಶಕ್ತಿ, ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ದೊರೆಯಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರಕಾರ ತನ್ನ ತಪ್ಪು ತಿದ್ದುಕೊಳ್ಳದೇ ಇದ್ದರೆ, ರಾಜ್ಯ ರಾಜಕೀಯದಲ್ಲಿ ಏನೂ ಬೇಕಾದ್ರೂ ಆಗಬಹುದು ಎನ್ನುವ ಮೂಲಕ ಕುತೂಹಲ ತೆರೆದಿಟ್ಟಿದ್ದಾರೆ.
ಹಾಸನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಗೆ ಉತ್ತಮ ಬೆಂಬಲ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಕೈಗೊಂಡಿರುವ ನಿರ್ಣಯ, ಆಪರೇಷನ್ ಕಮಲದಿಂದ ಉಬ್ಬಿಹೋಗಿರುವ ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡುವಷ್ಟು ಬಲ ಸಿಗಲಿದೆ ಎಂದರು.
ಪರಿಷತ್ನಲ್ಲೂ ಬಿಜೆಪಿ ಪ್ರಾಬಲ್ಯ ಮೆರೆದರೆ, ಅಲ್ಪಸಂಖ್ಯಾತರ ರಕ್ಷಣೆಗೆ ತೊಂದರೆಯಾಗಲಿದೆ ಎಂಬ ಕಾಳಜಿಯಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಜಾತ್ಯಾತೀತ ಪಕ್ಷಗಳ ಹೊಂದಾಣಿಕೆ ಅನಿವಾರ್ಯತೆಯನ್ನು ಗೌಡರು ಸಮರ್ಥಿಸಿಕೊಂಡರು.
ರಾಜ್ಯ ಸರಕಾರದ ಆಡಳಿತ ವೈಖರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಪಾಲರ ಕ್ರಮವನ್ನು ಪರೋಕ್ಷವಾಗಿ ಬೆಂಬಲಿಸಿದ ಗೌಡರು, ಇದು ರಾಜ್ಯ ಸರಕಾರಕ್ಕೆ ಎಚ್ಚರಿಕೆಯ ಗಂಟೆ ಎಂಬುದನ್ನು ಮನಗಾಣಬೇಕು. ಆಗಿರುವ ತಪ್ಪನ್ನು ತಿದ್ದುಕೊಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪ ಎಚ್ಚರಿಕೆ ವಹಿಸದೇ ಇದ್ದರೆ ಏನು ಬೇಕಾದ್ರೂ ಆಗಬಹುದು ಎಂದರು. ತಮ್ಮ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಸರಕಾರವನ್ನು ಎಂದೂ ನೋಡಿರಲಿಲ್ಲ ಎಂದು ವಿಷಾದಿಸಿದ ಗೌಡರು, ಮುಂಬರುವ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಲಘಟ್ಟವೇ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮುಖ್ಯಮಂತ್ರಿಯಾಗಲು ಮಾಜಿ ಡಿಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ನಿನ್ನೆ ವ್ಯಕ್ತಪಡಿಸಿದ ಅನಿಸಿಕೆಯನ್ನು ಸಮರ್ಥಿಸಿಕೊಂಡರಲ್ಲದೆ, ಅಂತಿಮ ತೀರ್ಮಾನ ಆ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.
ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯಲ್ಲಿ ಕೇಂದ್ರ ಸರಕಾರ ಆತುರದ ನಿರ್ಣಯ ಕೈಗೊಂಡಿದೆ ಎನಿಸುತ್ತದೆ ಎಂದ ಗೌಡರು, ಘೋಷಣೆಗೂ ಮುನ್ನ ಆಂಧ್ರದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನರ ವಿಶ್ವಾಸ ತೆಗೆದುಕೊಳ್ಳಬೇಕಿತ್ತು. ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಿದ್ದರೆ, ಈ ರೀತಿಯ ಕಹಿ ವಾತಾವರಣ ಮೂಡುತ್ತಿರಲಿಲ್ಲ ಎಂದರು.ಇದೇ ವೇಳೆ ಗಣಿಗಾರಿಕೆ ತನಿಕೆಗೆ ತಡೆ ನೀಡಿರುವ ಆಂಧ್ರ ಹೈಕೋರ್ಟ್ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಗೌಡರು, ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.
ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದಿನಕರನ್ ವಿವಾದ ಸಂಸತ್ ಮುಂದೆ ಇದ್ದು, ಈ ಬಗ್ಗೆ ಏನನ್ನೂ ಹೇಳಲು ಇಚ್ಚಿಸುವುದಿಲ್ಲ ಎಂದರು. ನೈಸ್ ವಿಷಯದಲ್ಲಿ ರಾಜ್ಯ ಸರಕಾರ ಇಡುತ್ತಿರುವ ಹೆಜ್ಜೆ ಬಗ್ಗೆ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ ಗೌಡರು, ರಾಜ್ಯದ ಅಡ್ವೋಕೇಟ್ ಜನರಲ್ ಮೇಲೆ ದೊಡ್ಡ ಜವಾಬ್ದಾರಿಯಿದ್ದು, ಅದಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು ಎಂದರು. ನೈಸ್ ವಿವಾದ ಹಿನ್ನೆಲೆಯಲ್ಲಿ ಜನತಾನ್ಯಾಯಾಲಯ ಕೈಗೊಳ್ಳುವ ನಿರ್ಣಯ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.