ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಆಕಾಶವಾಣಿಯ ಎಲ್ಲ ಬಾನುಲಿ ಕೇಂದ್ರಗಳಿಂದ ಮಾರ್ಚ್ ೧೧ ರಂದು ರಾತ್ರಿ ೯-೩೦ ರಿಂದ ೧೦-೩೦ ರವರೆಗೆ ಶಿಕ್ಷಣ ಸಂವಾದ ’ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಎಪ್ರಿಲ್ ೧ ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಶ್ರೀ ಎಮ್. ಎನ್. ಬೇಗ್ ಅವರು ಕೇಳುಗರ ಪ್ರಶ್ನೆಗೆ ಉತ್ತರಿಸುವರು. ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ತಮ್ಮ ಪ್ರಶ್ನೆಗಳನ್ನು ೦೮೦- ೨೨೩೭೦೪೭೭, ೨೨೩೭೦೪೮೮, ೨೨೩೭೦೪೯೯ ಕರೆ ಮಾಡಿ ಪರಿಹಾರ ಪಡೆಯಬಹುದಾಗಿದೆ.
ವಿಫಲ ಬಾವಿ ಅರ್ಜಿ ವಿಲೇವಾರಿಗೆ ತುರ್ತುಕ್ರಮ: ಸವದಿ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಜನವರಿ ಅಂತ್ಯದವರೆಗೆ ೨೨೦೨೭೪ ತೋಡುಬಾವಿಗಳಿಗೆ ಸಾಲ ನೀಡಲಾಗಿದ್ದು, ಅದರಲ್ಲಿ ೨೭೨೨೨ ವಿಫಲ ಬಾವಿಗಳಿಗೆ ಪರಿಹಾರ ನೀಡಲಾಗಿದೆ ಎಂದು ಸಹಕಾರ ಸಚಿವ ಶ್ರೀ ಲಕ್ಷ್ಮಣ ಸವದಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಸದಸ್ಯ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ವಿಫಲ ಬಾವಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಕಸ್ಕಾರ್ಡ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಅಲ್ಲದೇ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಶೀಘ್ರವೇ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಪತ್ರ ಬರೆಯಲಾಗದೆ ಎಂದರು.
ಉತ್ತರ ಕರ್ನಾಟಕದ ೧೪ ಜಿಲ್ಲೆಗಳು ನೆರೆ ಹಾವಳಿಗೆ ತುತ್ತಾಗಿದ್ದು, ಬೆಳೆಹಾನಿ ಪರಿಹಾರ ನೀಡಲಾಗಿದೆ. ಆದರೆ ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡಲು ಸದ್ಯದಲ್ಲಿ ತೊಂದರೆಯಿದೆ ಅದಾಗ್ಯೂ ಪರ್ಯಾಯ ಮಾರ್ಗಗಳನ್ನು ಚರ್ಚಿಸಿ ರೈತರ ಸಮಸ್ಯೆ ಪರಿಹರಿಸಲು ಯತ್ನಿಸಲಾಗುತ್ತಿದೆ ಎಂದು ಸದಸ್ಯ ಎಸ್.ಆರ್. ಪಾಟೀಲರ ಪ್ರಶ್ನೆಗೆ ಪ್ರತ್ಯುತ್ತರ ನೀಡಿದರು.