ರಾಮನಗರ ಏ.೨೪ ಕರ್ನಾಟಕ ವಾರ್ತೆ:ಭಾರತ ಸರ್ಕಾರದ ವಸತಿ ಹಾಗೂ ನಗರ ಬಡತನ ನಿರ್ಮೂಲನಾ ಸಚಿವಾಲಯವು ನಗರಗಳಲ್ಲಿರುವ ಒಣ ಶೌಚಾಲಯಗಳನ್ನು ಕನಿಷ್ಠ ಬೆಲೆಯ ಪ್ಲಶ್ ಶೌಚಾಲಯಗಳನ್ನಾಗಿ ಪರಿವರ್ತಿಸಲು ಹಾಗೂ ಯಾವುದೇ ಶೌಚಾಲಯಗಳಿಲ್ಲದೇ ಇರುವ ಕುಟುಂಬಗಳಿಗೆ ಪ್ಲಶ್ ಶೌಚಾಲಯವನ್ನು ಒದಗಿಸಲು ಸಮಗ್ರ ಕನಿಷ್ಠ ಬೆಲೆಯ ನೈರ್ಮಲ್ಯ ಯೋಜನೆಯನ್ನು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಜಾರಿಗೆ ತಂದಿದೆ. ರಾಮನಗರ ಜಿಲ್ಲೆಯ, ರಾಮನಗರ ನಗರಸಭೆ, ಚನ್ನಪಟ್ಟಣ ನಗರಸಭೆಗಳ ವ್ಯಾಪ್ತಿಯಲ್ಲಿರುವ ಬಡ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿ ಅನುಷ್ಠಾನಗೊಳಿಸಲು ಇಚ್ಛೆಯಿದ್ದು, ಈ ಕೆಳಕಂಡ ಅರ್ಹತೆ ಮತ್ತು ಅನುಭವ ಹೊಂದಿರುವ ನೋಂದಾಯಿತ ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಘ ಸಂಸ್ಥೆಗಳ ನೋಂದಣಿ ಕಾಯಿದೆಯಡಿ ನೋಂದಣಿಯಾಗಿದ್ದು, ನೋಂದಣಿ ಪ್ರಮಾಣ ಪತ್ರ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ರವರಿಂದ ಪ್ರಮಾಣಿತವಾದ ಹಿಂದಿನ ೩ ವರ್ಷಗಳ ಲೆಕ್ಕ ತನಿಖಾ ವರದಿಯನ್ನು ಹೊಂದಿರಬೇಕು. ಸಾಮಾಜಿಕ ವಲಯಗಳಾದ ಆರೋಗ್ಯ ವಿದ್ಯಾಭ್ಯಾಸ ಮುಂತಾದ ಕ್ಷೇತ್ರಗಳಲ್ಲಿ ಕನಿಷ್ಠ ಐದು ವರ್ಷಗಳ ಕೆಲಸ ಮಾಡಿದ ಅನುಭವವಿರಬೇಕು. ಫಲಾನುಭವಿಗಳನ್ನು ಗುರುತಿಸಿ ಛಾಯಾ ಚಿತ್ರಗಳೊಂದಿಗೆ ಪಟ್ಟಿ ಮಾಡುವುದು. ಯೋಜನಾ ವರದಿಗಳನ್ನು ತಯಾರಿಸಲು ಸ್ಥಳೀಯ ಸಂಸ್ಥೆಗಳಿಗೆ (ನಗರಸಭೆ) ಸಹಕರಿಸಬೇಕು. ಶೌಚಾಲುಗಳನ್ನು ನಿರ್ಮಿಸಿದ ನಂತರ ಎರಡು ವರ್ಷಗಳ ತನಕ ಆರು ತಿಂಗಳಿಗೊಮ್ಮೆ ಸ್ಥಳ ಪರಿಶೀಲನೆ ಮಾಡಿ ಅವುಗಳ ಸ್ಥಿತಿ ಹಾಗೂ ನಿರ್ವಹಣೆ ಬಗ್ಗೆ ವರದಿ ಮಾಡುವುದು. ಆಯ್ಕೆಯಾದ ಸರ್ಕಾರೇತರ ಸಂಸ್ಥೆಗಳಿಗೆ ಶೇ.೬೦:೧೫:೨೫ರಂತೆ ಹಣ ಪಾವತಿ ಮಾಡಲಾಗುವುದು. ಶೇ.೨೫ರ ಹಣವನ್ನು ಎರಡು ವರ್ಷಗಳ ಕಾರ್ಯಾಚರಣೆ ನಂತರ ಪಾವತಿಸಲಾಗುವುದು. ಮೇಲ್ಕಂಡ ಅರ್ಹತೆ ಮತ್ತು ಅನುಭವವುಳ್ಳ ಸರ್ಕಾರೇತರ ಸಂಸ್ಥೆಗಳು ಮೇ ೧೦ ರೊಳಗಾಗಿ ಈ ಕಛೇರಿಗೆ ತಲುಪುವಂತೆ ಅರ್ಜಿಗಳನ್ನು ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಯವರ ಕಛೇರಿ, ಮಿನಿ ವಿಧಾನಸೌಧ, ರಾಮನಗರ ಜಿಲ್ಲೆ, ರಾಮನಗರ ಇವರನ್ನು ಸಂಪರ್ಕಿಸುವುದು.