ಭಟ್ಕಳ: ಭಾರತ ದೇಶ ವಿಶ್ವದಲ್ಲಿಯೇ ಜ್ಞಾನಗಳ ಗಣಿಯಾಗಿ ರಾರಾಜಿಸುತ್ತಿದ್ದು, ಪ್ರತಿಭೆಗಳು ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕಾಗಿದೆ ಎಂದು ಮಂಗಳೂರು ಪಿ.ಎ.ಇಂಜಿನೀಯರಿಂಗ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ಡಾ.ದಸ್ತಗೀರ್ ಆಲಮ್ ಹೇಳಿದ್ದಾರೆ.
ಅವರು ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ ಮತ್ತು ಕಂಪೂಟರ್ ಎಪ್ಲಿಕೇಶನ್ ಭಟ್ಕಳ ಇದರ ಆಶ್ರಯದಲ್ಲಿ ನಡೆದ ಆಹ್ವಾನಿತ ಅಂತರ್ ಜಿಲ್ಲಾ ‘ಪ್ರತಿಭಾನ್ವೇಷಣೆ’ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಲ್ಲಿ ವಿವಿಧ ಧರ್ಮಗಳ ಜನರು ವಾಸವಾಗಿದ್ದಾರೆ. ವಿವಿಧ ಸಂಸ್ಕೃತಿಗಳಿಗೆ ನೆಲೆಯನ್ನೊದಗಿಸಿದ ಈ ದೇಶದಲ್ಲಿ ಅವಕಾಶಗಳೂ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತಿವೆ ಎಂದು ವಿವರಿಸಿದರು. ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಎಚ್.ಶಬ್ಬರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಹಮ್ಮದ್ ಅನ್ಸಾರ್ ಕಾಶೀಮ್ಜಿ,ಪ್ರಭಾರಿ ಪ್ರಧಾನಕಾರ್ಯದರ್ಶಿ ಎಸ್.ಎಮ್.ಸೈಯದ್ ಅಬ್ದುಲ್ ಅಜೀಮ್ ಮುಂತಾದವರು ಉಪಸ್ಥಿತರಿದ್ದರು. ಬಿಬಿಎ ಕಾಲೇಜು ಪ್ರಾಚಾರ್ಯ ಝಫ್ರುಲ್ಲಾ ಕೊಕಟ್ನೂರ್ ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕಿ ನೂರಿ ಅಸಾದ್ ವಂದನಾರ್ಪಣೆ ಸಲ್ಲಿಸಿದರು. ಆಶಿಯಾ ಶೇಖ್ ಅತಿಥಿಗಳನ್ನು ಪರಿಚಯಿಸಿದರು. ರವಿವಾರ ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಬೆಳಗಾವಿ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಎಮ್ಬಿಎ ವಿಭಾಗದ ಮುಖ್ಯಸ್ಥ ಎಮ್.ಎಮ್.ಮುನ್ಶಿ ನೆರವೇರಿಸಿದರು. ಆಶ್ಫಾಕ್ ಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯ ಝಫ್ರುಲ್ಲಾ ಕೋಕಟನೂರ್ ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕಿ ಸಿಂಚನ ಅತಿಥಿಗಳನ್ನು ಪರಿಚಯಿಸಿದರು.