ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಗಂಭೀರ ರೂಪದಲ್ಲಿ ಹಾವಳಿಗೆ ತುತ್ತಾದ ಗ್ರಾಮಗಳಿಗೆ ನೂರು ಕೋಟಿ ರೂ - ಯಡಿಯೂರಪ್ಪ

ಬೆಂಗಳೂರು: ಗಂಭೀರ ರೂಪದಲ್ಲಿ ಹಾವಳಿಗೆ ತುತ್ತಾದ ಗ್ರಾಮಗಳಿಗೆ ನೂರು ಕೋಟಿ ರೂ - ಯಡಿಯೂರಪ್ಪ

Sat, 03 Oct 2009 02:56:00  Office Staff   S.O. News Service
ಬೆಂಗಳೂರು, ಅ.2: ಗಂಭೀರ ಸ್ವರೂಪದಲ್ಲಿ ನೆರೆ ಹಾವಳಿಗೆ ತುತ್ತಾದ ಜಿಲ್ಲೆಗಳಿಗೆ ತುರ್ತು ಪರಿಹಾರ ಕೈಗೊಳ್ಳಲು ಇಂದು 100 ಕೋಟಿ ಹಾಗೂ ನಿನ್ನೆ 41 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಮುಳುಗಡೆಯಾದ ಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆಗೆ ಸೈನ್ಯದ ನೆರವು ಪಡೆಯಲಾಗಿದ್ದು, ನಾಲ್ಕು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ಆರಂಭಿಸಿವೆ. ಸಂಜೆಯ ವೇಳೆಗೆ ಇನ್ನೂ ಆರು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮೈಸೂರಿನ ಸುತ್ತೂರು ಮಠದಲ್ಲಿ ಸಂಘ ಪರಿವಾರದ ಮುಖಂಡರೊಂದಿಗೆ ಸಂಪುಟದ ಎಲ್ಲ ಸಚಿವರ ಜೊತೆಯಾಗಿ ಮೂರು ದಿನಗಳ ಚಿಂತನ ಬೈಠಕನ್ನು ನಡೆಸಿದನಂತರ ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದಲ್ಲಿ ಅಧಿಕಾರಿಗಳು ಮತ್ತು ಸೈನ್ಯದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಸಭೆಯನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ಮಳೆಗೆ ಸಂಬಂಧಿಸಿದ ಅನಾಹುತಗಳಲ್ಲಿ ೭೪ ಮಂದಿ ಸಾವನ್ನಪ್ಪಿದ್ದಾರೆ. ೭೪ ಮಂದಿಯ ರಕ್ಷಣೆ ಮಾಡಲಾಗಿದೆ. ೨೬ ಸಾವಿರ ಮನೆಗಳು ಕುಸಿದಿವೆ ಎಂದು ಮಾಹಿತಿ ನೀಡಿದರು.

ನೆರೆ ಸಂತ್ರಸ್ತರರಿಗೆ ಹನ್ನೊಂದು ಜಿಲ್ಲೆಗಳಲ್ಲಿ ೯೮ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಗತ್ಯವಿರುವೆಡೆ ಆಹಾರದ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಖಾಸಗಿ, ಸರಕಾರಿ ಮತ್ತು ಸೈನ್ಯದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ ಬೋಟ್‌ಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ಪುಣೆಯಲ್ಲಿರುವ ಪ್ರಕೃತಿ ವಿಕೋಪ ನಿರ್ವಹಣಾ ಪಡೆಯ ೧೦೦ ಮಂದಿ ತಜ್ಞರು ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದು, ೩೨ ಬೋಟ್‌ಗಳನ್ನು ತಂದಿದ್ದಾರೆ ಎಲ್ಲವನ್ನೂ ಬಳಸಿಕೊಂಡು ಜನರ ಪ್ರಾಣ ರಕ್ಷಣೆ ಮಾಡಲಾಗುವುದು.

ಅತಿವೃಷ್ಟಿ ಸಂಭವಿಸಿದ ೨೪ ಗಂಟೆಯೊಳಗೆ ಸರಕಾರ ನೆರವಿಗೆ ಧಾವಿಸಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ ೧೫೯ ಕೋಟಿ ರೂಪಾಯಿ ಇದೆ. ನಿನ್ನೆ ೪೧ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಗಂಭೀರ ಸ್ವರೂಪದ ತೊಂದರೆಗೊಳಗಾದ ಬಿಜಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ ಸೇರಿ ೬ ಜಿಲ್ಲೆಗಳಿಗೆ ತಲಾ ೧೨ ಕೋಟಿ ರೂಪಾಯಿಗಳಂತೆ ೭೨ ಕೋಟಿ, ಧಾರವಾಡ, ಬೆಳಗಾವಿ, ಗುಲ್ಬರ್ಗ ಜಿಲ್ಲೆಗಳಿಗೆ ತಲಾ ೬ ಕೋಟಿಯಂತೆ ೧೮ ಕೋಟಿ, ಕನಿಷ್ಠ ಪ್ರಮಾಣದ ಹಾನಿಗೊಳಗಾದ ಹಾವೇರಿ, ಬೀದರ್ ಜಿಲ್ಲೆಗಳಿಗೆ ತಲಾ ೫ ಕೋಟಿ ರೂಪಾಯಿಯಂತೆ ೧೦ ಕೋಟಿ ರೂಪಾಯಿ ಸೇರಿ ಒಟ್ಟು ೧೦೦ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಪರಿಹಾರಕ್ಕೆ ಒಟ್ಟು ೩೦೦ ಕೋಟಿ ರೂಪಾಯಿ ಲಭ್ಯವಿದೆ ಎಂದು ಯಡಿಯೂರಪ್ಪ ವಿವರ ನೀಡಿದರು.

ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳು ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿವೆ. ಬಾಗಲಕೋಟೆ, ಬಿಜಾಪುರ, ಹುಬ್ಬಳ್ಳಿ ಜಿಲ್ಲೆಗಳ ಕಾರ್ಯಾಚರಣೆಗೆ ತಲಾ ಎರಡರಂತೆ ಇನ್ನೂ ೬ ಹೆಲಿಕಾಪ್ಟರ್‌ಗಳನ್ನು ಕರೆಸಿಕೊಳ್ಳಲಾಗುವುದು. ನೆರೆಯ ಜಿಲ್ಲೆಗಳಲ್ಲಿ ಸಂಭವಿಸುವ ಅನಾಹುತಗಳಿಗೂ ಈ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ನುಡಿದರು.

ಮನೆ ಕಳೆದುಕೊಂಡವರಿಗೆ ಆಶ್ರಯ ಯೋಜನೆಯಿಂದ ಮನೆ ನಿರ್ಮಿಸಿ ಕೊಡಲಾಗುವುದು. ಪ್ರಾಣ ಹಾನಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ವಾಯು ಸೇನೆ, ಭೂ ಸೇನೆಗಳ ನೆರವು ಪಡೆಯಲಾಗಿದೆ. ಸಂತ್ರಸ್ತ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಸಮುದಾಯ ಭವನ, ಶಾಲಾ-ಕಾಲೇಜು ಕಟ್ಟಡಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಮಳೆ ನಿಂತನಂತರ ಸಮಗ್ರ ವಿವರ ಸಂಗ್ರಹಿಸಿ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಇನ್ನೊಮ್ಮೆ ಮನವಿ ಸಲ್ಲಿಸಲಾಗುವುದು ಎಂದ ಅವರು, ಈರವೆಗೆ ಸಂಭವಿಸಿರುವ ಅನಾಹುತಗಳ ಬಗ್ಗೆ ಪ್ರಧಾನ ಮಂತ್ರಿಗೆ ಮಾಹಿತಿ ನೀಡಲಾಗಿಲ್ಲ. ಕೂಡಲೇ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಸಂಪರ್ಕಿಸಲು ಯತ್ನಿಸಲಾಗುವುದು. ಅಂಕಿ ಅಂಶಗಳನ್ನು ಫ್ಯಾಕ್ಸ್ ಮೂಲಕ ರಕ್ಷಣಾ ಇಲಾಖೆಗೆ ರವಾನಿಸಲಾಗಿದೆ ಎಂದರು.

ಅ.೪ರಂದು ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ನೆರೆಯ ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ, ಸಾರಿಗೆ ಸಚಿವ ಆರ್.ಅಶೋಕ್ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಸಭೆಯಲ್ಲಿದ್ದರು.

ಯಡಿಯೂರಪ್ಪನವರಿಗೆ ಬೆಳ್ಳಿ ಕಿರೀಟ

ಬೆಂಗಳೂರು: ಕೆ‌ಎಂಎಫ್‌ನ ನೂತನ ಅಧ್ಯಕ್ಷರಾಗಿರುವ ಬಳ್ಳಾರಿ ಗಣಿಧಣಿಗಳ ಸಹೋದರ ಮತ್ತು ಶಾಸಕ ಸೋಮಶೇಖರ ರೆಡ್ಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇಂದು ‘ಕ್ಷೀರ ಬಂಧು’ ಎಂಬ ಬಿರುದು ನೀಡಿ, ಬೆಳ್ಳಿ ಕೀರಿಟ ತೋಡಿಸಿ ಸನ್ಮಾನಿಸಿದ್ದಾರೆ.

ಬೆಂಗಳೂರು-ತುಮಕೂರು ನಡುವಿನ ದಾಬಸ್‌ಪೇಟೆಯಲ್ಲಿ ನಡೆದ ಹಾಲು ಉತ್ಪಾದಕರ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಹಾಲು ಒಕ್ಕೂಟ ನಡೆದು ಬಂದ ದಾರಿಯನ್ನು ಯಡಿಯೂರಪ್ಪ ವಿವರಿಸಿದರು. ದೇಶದಲ್ಲಿ ಕೆ‌ಎಂಎಫ್ ಮೊದಲ ಸ್ಥಾನಕ್ಕೇರಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಳೆ ಹಾನಿಯ ಬಗ್ಗೆ ಪ್ರಸ್ತಾಪಿಸಿದ ಯಡಿಯೂರಪ್ಪ, ವರುಣನ ರುದ್ರ ತಾಂಡವದಿಂದ ಬಹಳಷ್ಟು ಹಾನಿಯಾಗಿದೆ. ‘ಸಿಟ್ಟಿದ್ದರೆ ಬೇರೆ ರೀತಿಯಲ್ಲಿ ತಿರಿಸಿಕೋ, ಆದರೆ, ಅನ್ನದಾತನಾದ ರೈತನ ಮೇಲೆ ಪ್ರಯೋಗಿಸಬೇಡ. ಶಾಂತನಾಗು’ ಎಂದು ತಾನು ವರುಣದೇವನಲ್ಲಿ ಪ್ರಾರ್ಥಿಸುವುದಾಗಿ ನುಡಿದರು.

ಅತಿವೃಷ್ಟಿಯಿಂದ ಸಂತ್ರಸ್ತರಾಗಿ ಗಂಜಿಕೇಂದ್ರಗಳಲ್ಲಿರುವ ಜನರಿಗೆ ಕೆ‌ಎಂಎಫ್‌ನಿಂದ ಉಚಿತವಾಗಿ ಹಾಲು ಪೂರೈಕೆ ಮಾಡುವುದಾಗಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್‌ರೆಡ್ಡಿ ತಿಳಿಸಿದರು. ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಅವರು ಘೋಷಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಚನ್ನಿಗಪ್ಪ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಅತಂತ್ರದಲ್ಲಿ ಮಂತ್ರಾಲಯ

ಬೆಂಗಳೂರು: ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರಾಯಚೂರು ಗಡಿ ಭಾಗದ ಮಂತ್ರಾಲಯ ಅತಿವೃಷ್ಟಿಯಿಂದಾಗಿ ಸಂಪೂರ್ಣ ಜಲಾವೃತವಾಗಿದ್ದು ಸುಮಾರು ೨ ಸಾವಿರ ಜನ ನೀರಿನ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ.

ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದ ಮಂತ್ರಾಲಯದ ತುಂಬೆಲ್ಲ ನೀರು ತುಂಬಿದ್ದು. ಇಲ್ಲಿನ ಮಠದ ನೆಲ ಮಹಡಿಯಿಂದ ಮೊದಲನೆ ಅಂತಸ್ತಿನ ವರೆಗೂ ನೀರು ತುಂಬಿಕೊಂಡುದರಿಂದ ಮಠದ ಶ್ರೀ ಸುಯತೀಂದ್ರ ಸ್ವಾಮೀಜಿ ಮತ್ತು ಮಠಕ್ಕೆ ಭೇಟಿ ನೀಡಿದ್ದ ಭಕ್ತರು ಎರಡನೆ ಮಹಡಿಯಲ್ಲಿ ತಂಗಿದ್ದರು. ಸಂಘ ಪರಿವಾರದ ಮುಖಂಡ ಮತ್ತು ಸಂಸದ ಅನಂತ ಕುಮಾರ್‌ರ ಆಪ್ತ  ಸುಬ್ಬಾ ನಾಯ್ಡು ಕೂಡ ಮಠದಲ್ಲಿ ನೆರೆಗೆ ಸಿಲುಕಿದ್ದರು ಎನ್ನಲಾಗಿದೆ. 

ಮಠದಲ್ಲಿದ್ದವರ ರಕ್ಷಣೆಗೆ ತುರ್ತು ಕಾರ್ಯಾಚರಣೆ ನಡೆಸಿದ ರಾಜ್ಯ ಸರಕಾರ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಿ ಸ್ವಾಮೀಜಿ, ನಾಲ್ಕು ಮಂದಿ ಶಿಷ್ಯರನ್ನು ಮತ್ತು ಸುಬಾ  ನಾಯ್ಡು ಅವರನ್ನು ರಾಯಚೂರು ಪಟ್ಟಣಕ್ಕೆ ಕರೆತಂದಿತು. ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ವಾಯು ಪಡೆಯ ಯೋಧರೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದೇ ಮಠದಲ್ಲಿ ಸಿಲುಕಿರುವ ಸಾವಿರಾರು ಜನರು ಮತ್ತು ಮಕ್ಕಳಿಗೆ ನಿನ್ನೆ ರಾತ್ರಿಯಿಂದ ಆಹಾರವಿಲ್ಲದೆ ಇದ್ದುದರಿಂದ ಕೆಲವರು ಅಸ್ವಸ್ಥಗೊಂಡಿರುವುದಾಗಿ ದೂರವಾಣಿಯಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಾಚರಣೆಗೆ ಬಳಕೆಯಾಗಿದ್ದ ಹೆಲಿಕಾಪ್ಟರ್‌ಗಳಿಗೆ ಇಂಧನ ಕೊರತೆಯಾದುದರಿಂದ ಕೆಲವರನ್ನಷ್ಟೇ ಹೊರ ಕರೆತರಲಾಗಿದೆ. ಸಂಜೆಯನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಮಠ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ವಸತಿ ಗೃಹಗಳ ಕಟ್ಟಡಗಳು ಶಿಥಲಗೊಂಡಿರುವುದರಿಂದ ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆಯಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆತಂಕ ವ್ಯಕ್ತಪಡಿಸಿದ್ದಾರೆ

Share: