ಬೆಂಗಳೂರು, ಡಿ.12: ಮಹಾದಾಯಿ ನದಿ ನೀರು ಹಂಚಿಕೆ ಬಗ್ಗೆ ಕರ್ನಾಟಕ ಹಾಗೂ ಗೋವಾ ನಡುವಿನ ವಿವಾದ ವನ್ನು ಬಗೆಹರಿಸಲು ಕೇಂದ್ರ ಸರಕಾರ ರಚಿಸಲು ಉದ್ದೇಶಿಸಿರುವ ನ್ಯಾಯಾಧಿಕರಣದ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕೇಂದ್ರ ಕಾನೂನು ಸಚಿವ ಎಂ.ರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ನ್ಯಾಯಾಧೀಕರಣ ರಚಿಸಲು ಕೇಂದ್ರ ಸರಕಾರ ನಿರ್ಧರಿಸಿರುವ ಕ್ರಮ ರಾಜಕೀಯ ಪ್ರೇರಿತವಾದುದು. ಅಲ್ಲದೆ ಏಕಪಕ್ಷೀಯ ತೀರ್ಮಾನವಾಗಿದೆ ಎಂಬ ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿರ ಆರೋಪಕ್ಕೆ ಶನಿವಾರ ನಗರದಲ್ಲಿ ಮೊಯ್ಲಿ ಪ್ರತಿಕ್ರಿಯಿಸಿದರು.
ಗೋವಾ ಸರಕಾರದ ಒತ್ತಡಕ್ಕೆ ಮಣಿದು ನ್ಯಾಯಾಧೀಕರಣವನ್ನು ರಚಿಸಲು ನಿರ್ಧರಿಸಿಲ್ಲ. ಈ ಕುರಿತು ಅಪಸ್ವರ ಎತ್ತುವುದು ಸರಿಯಾದ ಕ್ರಮವಲ್ಲ ಎಂದು ಹೇಳುವ ಮೂಲಕ ನ್ಯಾಯಾಧಿಕರಣ ರಚಿಸುವ ಕೇಂದ್ರದ ನಿರ್ಧಾರವನ್ನು ಮೊಯ್ಲಿ ಸಮರ್ಥಿಸಿಕೊಂಡರು.
ಅಕ್ರಮ ಆಸ್ತಿ ಗಳಿಕೆಯ ಆರೋಪ ಎದುರಿಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಬಗ್ಗೆ ಪ್ರತಿಕ್ರಿಯಿಸಲು ಮೊಯ್ಲಿ ಈ ಸಂದರ್ಭದಲ್ಲಿ ನಿರಾಕರಿಸಿದರು.