ಬೆಂಗಳೂರು: ಮಗು ಮಾಡಿಕೊಳ್ಳುವ ವಿಚಾರಕ್ಕೆ ನವವಿವಾಹಿತ ದಂಪತಿ ನಡುವೆ ಉಂಟಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾದ ಘಟನೆ ಎಚ್ ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ಮೂಲದ ಗಿರಿಜಾ (30) ಕೊಲೆಯಾದ ಮಹಿಳೆ.
ಕೃತ್ಯ ಎಸಗಿದ ಪತಿ ನವೀನ್ ಕಮಾರ್ (32)ನನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರ ತಾಲೂಕು ಮಾಯಗಾನಹಳ್ಳಿ ಮೂಲದ ನವೀನ್ಕುಮಾರ್ ಮಾಡರ್ನ್ ಬ್ರೆಡ್ ವಿತರಕರಾಗಿದ್ದು, 8 ತಿಂಗಳ ಹಿಂದೆ ಭಟ್ಕಳ ಮೂಲದ ಗಿರಿಜಾಳನ್ನು ವಿವಾಹವಾಗಿದ್ದ ದಂಪತಿ ಅನ್ನಸಂದ್ರಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಹೆಚ್ಚು ಪ್ರಯಾಣ ಮಾಡಿದ್ದರಿಂದ ಗಿರಿಜಾಗೆ ಗರ್ಭಪಾತವಾಗಿತ್ತು.
ಹೀಗಾಗಿ ವೈದ್ಯರು ಕೆಲ ತಿಂಗಳು ಮಗು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ, ಗಿರಿಜಾ ಮಗು ಮಾಡಿಕೊಳ್ಳೋಣ ಎಂದು ಹಠಕ್ಕೆ ಬಿದ್ದಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ಮನಸ್ತಾಪವಾಗಿತ್ತು. ಪತ್ನಿ ಮಗು ಬೇಕೆಂದರೆ, ಪತಿ ತಕ್ಷಣಕ್ಕೆ ಮಗು ಬೇಡವೆಂದು ವಾದಿಸುತ್ತಿದ್ದರು. ಇದೇ ವಿಚಾರವಾಗಿ ರಾತ್ರಿ 10:30ರ ಸುಮಾರಿಗೆ ದಂಪತಿ ನಡುವೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ನವೀನ್ಕುಮಾರ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಮಹಿಳೆ ಕೊಲೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ನವೀನ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಆಕೆ ಪೋಷಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದರು. ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ