ಶಾರ್ಜಾ, ಅಕ್ಟೋಬರ್ 2: ಮುರ್ಡೇಶ್ವರ್ ನವಾಯತ್ ಜಮಾತ್ ಸಂಘಟನೆ ಈ ವರ್ಷದ ಈದ್ ಮಿಲನ್ ಕಾರ್ಯಕ್ರಮವನ್ನು ನಗರದ ಹೊರವಲಯದಲ್ಲಿರುವ ಅಲ್ ಫಲಾ ಫಾರ್ಮ್ ಹೌಸ್ ನಲ್ಲಿ ಆಚರಿಸಿಕೊಂಡಿತು.


ಇಂದು ಮಧ್ಯಾಹ್ನ ಜುಮಾ ನಮಾಜ್ ಬಳಿಕ ಸ್ವಾದಿಷ್ಟ ಭೋಜನದ ಬಳಿಕ ಕಾರ್ಯಕ್ರಮ ಅಬು ತಲ್ಹಾರವರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ಜಮಾತ್ ಅಧ್ಯಕ್ಷರಾದ ಜಿದ್ದಾ ಅಬ್ದುಲ್ ರಹ್ಮಾನ್ ರವರು ಸ್ವಾಗತಿಸಿ ಕಾರ್ಯಕ್ರಮದ ವಿವರ ನೀಡಿದರು.
ವೇದಿಕೆಯಲ್ಲಿ ಜಮಾತ್ ನ ಹಿರಿಯ ಸದಸ್ಯರಾದ ಮನ್ನಾ ಮೊಹಮ್ಮದ್ ಗೌಸ್, ಮುರ್ಡೇಶ್ವರ ಜಮಾತ್ ಮಾಜಿ ಶಿಕ್ಷಣ ಕಾರ್ಯದರ್ಶಿ ಜನಾಬ್ ಹಾಜಿಅಮೀನ್ ಸಿದ್ದಿ ಮೊಹಮ್ಮದ್ ಉಪಸ್ಥಿತರಿದ್ದರು. ಸಂಘಟನೆಯ ಬಹುತೇಕ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ತಮ್ಮ ಭಾಷಣದಲ್ಲಿ ಮನ್ನಾ ಮೊಹಮ್ಮದ್ ಗೌಸ್ ರವರು ಜಮಾತ್ ಕಾರ್ಯಚಟುವಟಿಕೆಗಳಲ್ಲಿ ಯುವಕರು ಹೆಚ್ಚಿನ ಆಸಕ್ತಿ ವಹಿಸುವಂತೆ ಕರೆನೀಡಿದರು.

ಬಳಿಕ ಮಾತನಾಡಿದ ಹಾಜಿಅಮೀನ್ ಸಿದ್ದಿ ಮೊಹಮ್ಮದ್ ರವರು ಈ ವರೆಗೆ ಜಮಾತ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಬೆಳಕು ಚೆಲ್ಲಿದರು. ಊರಿನಲ್ಲಿ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಜಮಾತ್ ವತಿಯಿಂದ ನಡೆಸಲಾಗುತ್ತಿರುವ ಪ್ರಯತ್ನಗಳು ಹಾಗೂ ಇದುವರೆಗೆ ಸಾಧಿಸಿದ ಸಾಧನೆ ಹಾಗೂ ಕಳೆದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಉನ್ನತ ಶಿಕ್ಷಣದ ಬಗ್ಗೆ ಹಲವು ವಿವರಗಳನ್ನು ನೀಡಿದರು. ಮುರ್ಡೇಶ್ವರದಿಂದ ಮೈಸೂರು ಬೆಂಗಳೂರುಗಳಿಗೆ ಹೋಗಿ ನೆಲೆಸಿರುವ ಕುಟುಂಬಗಳು ತನ್ನ ಅನುಕೂಲಕ್ಕೆ ತಕ್ಕಂತೆ ವರ್ಷಕ್ಕೊಂದೆರೆಡು ಬಾರಿಯಾದರೂ ಊರಿಗೆ ಆಗಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಪಡೆದಿರುವ ಪ್ರಗತಿಯನ್ನು ಪರಾಮರ್ಶಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಪ್ರಗತಿಗಾಗಿ ತಮ್ಮ ಅಮೂಲ್ಯ ಸಲಹೆ ನೀಡುವಂತೆ ಕರೆ ನೀಡಿದರು.


ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಜಿಅಮೀನ್ ಮುದಸ್ಸಿರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಆ ಬಳಿಕ ಸಂಘಟನೆಯ ಸದಸ್ಯರು ಹಲವು ಮನರಂಜನಾ ಕಾರ್ಯಕ್ರಮಗಳನ್ನು ಸಾದರಪಡಿಸಿ ನೆರೆದವರನ್ನು ರಂಜಿಸಿದರು.

ಪಾಂಗಳ್ ಆಬೀದ್ ರವರು ನಾತ್ ಒಂದನ್ನು ಸುಶ್ರಾವ್ಯವಾಗಿ ಹಾಡಿದರು. ಮದ್ದಾಸ್ ಸಿದ್ದಿ ಮೊಹಮ್ಮದ್ ರವರು ಇನ್ನೊಂದು ಶಾಯರಿಯನ್ನು ಪ್ರಸ್ತುತಪಡಿಸಿದರು.

ತಮ್ಮ ನಗೆಹನಿ ಮತ್ತು ಅಣಕುಗೀತೆಗಳಿಂದ ಸದಾ ನಗಿಸುವ ಹಾಜಿಅಮೀನ್ ಮೊಹಮ್ಮದ್ ರವೂಫ್ ರವರು ಈದ್ ಮಿಲನ್ ವಚ್ಚಾಂವ್, ಈದ್ ಮಿಲನ್ ವಚ್ಚಾಂ ಎಂಬ ತಮ್ಮ ಸ್ವಕೃತಿಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಗೆದ್ದರು. ಎಂದಿನಂತೆ ಕೆಲವು ಅಣಕುಗೀತೆಗಳನ್ನು ಹಾಡಿ ನೆರೆದವರು ನಗೆಗಡಲಿನಲ್ಲಿ ತೇಲುವಂತೆ ಮಾಡಿದರು.
ಬಳಿಕ ಪ್ರಾರಂಭವಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹಲವು ಯುವಕರು ಸ್ವಾರಸ್ಯಕರ ಪ್ರಶ್ನೆಗಳಿಂದ ನೆರೆದವರ ಕುತೂಹಲ ಕೆರಳಿಸಿದರು. ಪ್ರತಿ ಪ್ರಶ್ನೆಗೂ ಒಂದು ಬಹುಮಾನವಿದ್ದ ಕಾರಣ ನೆರೆದವರೆಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿದರು. ಗೌಡಾ ಅತಾವುರ್ರಹ್ಮಾನ್ ರವರು ಹಲವು ಇಸ್ಲಾಮಿಕ್ ರಸಪ್ರಶ್ನೆಯಿಂದ ಇನ್ನೂ ಹಲವರು ಬಹುಮಾನಗಳನ್ನು ಪಡೆಯುವಂತೆ ಮಾಡಿದರು. ಆ ನಂತರ ಅರ್ಶದ್ ಹುಸೇನ್ ಹಾಗೂ ಮೌಲಾನಾ ನೂರುಲ್ ಹಕ್ ಗಂಗಾವಳಿ ತಂಡ ’ವಿಜ್ಞಾನ ಇಂದು ಪ್ರಮಾಣಿಸಿದ ಕುರಾನ್ ವಾಕ್ಯಗಳು’ ಎಂಬ ವಿಷಯದ ಮೇಲೆ ಪ್ರಬಂಧವೊಂದನ್ನು ಮಂಡಿಸಿದರು. ಹಲವು ಕುರಾನ್ ವಾಕ್ಯಗಳನ್ನು ಅವುಗಳ ಭಾಷಾಂತರ ಹಾಗೂ ಇಂದು ಆ ವಾಕ್ಯಗಳನ್ನು ವಿಜ್ಞಾನ ಪ್ರಮಾಣಿಸಿದ ವಿವರಗಳನ್ನು ನೀಡಿ ಈ ಕುರಿತು ಕುತೂಹಲ ಕೆರಳಿಸುವಲ್ಲಿ ನೆರವಾದರು.



ಬಳಿಕ ಹಾಜಿಅಮೀನ್ ಜ಼ಿಲ್ಲುಲ್ಲಾ ಹಾಗೂ ಸಂಗಡಿಗರು ಏಕ್ ಮಿನಟ್ ಕಾರ್ಯಕ್ರಮಗಳನ್ನು ಆಯೋಜಿಸಿ ಹಲವು ಆಟೋಟಗಳ ಮೂಲಕ ಹಿರಿಯರೂ ಮಕ್ಕಳಂತೆ ನಲಿಯುವಲ್ಲಿ ಸಹಕರಿಸಿದರು. ಜಮಾತ್ ವತಿಯಿಂದ ಮೊಬೈಲ್ ಫೋನ್ ಒಂದನ್ನು ಅದೃಷ್ಟಚೀಟಿಯ ಮೂಲಕ ಸದಸ್ಯರೊಬ್ಬರಿಗೆ ನೀಡಲಾಯಿತು.
ಅಂತಿಮವಾಗಿ ಧಿಂಡಾ ಅಹ್ಮದ್ ಅಲಿಯವರು ವಂದನಾರ್ಪಣೆ ಸಲ್ಲಿಸಿದ ಬಳಿಕ ಸಭೆ ಮುಕ್ತಾಯ ಕಂಡಿತು.
ಚಿತ್ರ, ವರದಿ: ಅರ್ಶದ್ ಹುಸೇನ್, ದುಬೈ.