ಮಂಗಳೂರು: ಹಿಂದಿನ ಮಹಿಳೆ ಯರಿಗೆ ವಿಧ್ಯಾಭ್ಯಾಸ ಇಲ್ಲದಿದ್ದರೂ ಅವರು ಆಡುವ ಮಾತು ಇತರ ನಡೆ ನುಡಿಗಳಲ್ಲಿ ಅಪ್ಪಟ ಬ್ಯಾರಿ ಸಾಹಿತ್ಯ ಅಡಗಿತ್ತು. ಆದರೆ ಇಂದಿನ ಮಹಿಳೆಯರು ಸಾಹಿತ್ಯದತ್ತ ಗಮನ ಹರಿಸುತ್ತಿಲ್ಲ ಎಂಬ ಖೇದ ನ್ಯಾಷನಲ್ ವುಮೆನ್ಸ್ ಫೆಡರೇಶನ್ನಿನ ರಾಜ್ಯ ಸದಸ್ಯೆ ಫಾತಿಮಾ ನಸೀಮರದ್ದಾಗಿದೆ.
ನಿನ್ನೆ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿ ಯಿಂದ ಪುರಭವನದಲ್ಲಿ ನಡೆದ ಬ್ಯಾರಿ ಮಹಿಳಾ ಸಾಹಿತ್ಯ ಸಮಾವೇಶದಲ್ಲಿ `ಬ್ಯಾರಿ ಕ್ಷೇತ್ರತ್ತ್ಲ್ ಪೆನ್ನಿಂಙ ( ಬ್ಯಾರಿ ಕ್ಷೇತ್ರದಲ್ಲಿ ಮಹಿಳೆಯರು) ಎಂಬ ವಿಷಯ ದ ಕುರಿತು ಅವರು ಮಾತನಾಡಿದರು.
ಅಜ್ಜಿಯಂದಿರು ಮಕ್ಕಳಿಗೆ ಹಾಡುವ ಲಾಲಿ ಹಾಡು, ಅವರ ಮಾತುಗಳು, ಕತೆಗಳು, ಗಾದೆಗಳು ಎಲ್ಲವೂ ಅಪ್ಪಟ ಬ್ಯಾರಿ ಭಾಷೆಯಿಂದ ಕೂಡಿದ್ದು ಇದರಲ್ಲಿ ಸಾಹಿತ್ಯವೂ ಅಡಗಿದೆ. ಆದರೆ ಇಂದಿನ ಮಹಿಳೆಯರಲ್ಲಿ ವಿದ್ಯೆಯಿದ್ದರೂ ಸಾಹಿತ್ಯ ಜ್ಞಾನ ಇಲ್ಲವೆಂದರು.
ಇಂದು ಬ್ಯಾರಿಗಳು ಇಸ್ಲಾಮಿನ ಆಚಾರ-ವಿಚಾರ ಸಂಸ್ಕತಿಯ ಬಗ್ಗೆ ಅವಹೇಳನಕಾರಿಯಾಗಿ ಬರೆದರೆ ಅವರ ಸಾಹಿತ್ಯ ತಕ್ಷಣ ಬೆಳಕಿಗೆ ಬರುತ್ತದೆ. ಆದರೆ ಉತ್ತಮ ಸಾಹಿತ್ಯಗಳುಳ್ಳ ಪುಸ್ತಕಗ ಳು ಬೆಳಕಿಗೆ ಬರುವುದೇ ಇಲ್ಲ ಎಂಬ ಬೇಸರ ವೂ ಅವರದ್ದಾಗಿತ್ತು.
ತುಳು ಮತ್ತು ಬ್ಯಾರಿ ಭಾಷೆಗೆ ಅನ್ಯೋನ್ಯ ಸಂಬಂಧವಿದೆ. ತುಳು ಭಾಷೆ ನಾಶವಾಗುತ್ತಿದೆ ಎಂದು ಯುನೆಸ್ಕೊ ವರದಿ ಮಾಡಿದಾಗ ಜಿಲ್ಲೆಯ ಜನ ಎಚ್ಚೆತ್ತು ವಿಶ್ವ ತುಳು ಸಮ್ಮೇಳನದ ಮೂಲಕ ಆ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ.
ಬ್ಯಾರಿ ಭಾಷೆಯೂ ಇದೇ ಸ್ಥಿತಿಗೆ ತಲುಪಿದ್ದು ಮಹಿಳೆಯರು ಇದರತ್ತ ಗಮನ ಹರಿಸಿ ಭಾಷೆ ಉಳಿ ವಿಗೆ ಪ್ರಯತ್ನಿಸಬೇಕೆಂದರು. ಮಹಿಳೆಯರು ತಮಗೆ ಸಿಕ್ಕ ಸಮಯದಲ್ಲಿ ಧಾರವಾಹಿ ನೋಡುವು ದಕ್ಕೆ, ತಿರುಗಾಟ ನಡೆಸುವುದಕ್ಕೆ ಅಥವಾ ಹರಟೆ ಹೊಡೆಯವುದಕ್ಕೆ ಮೀಸಲಿಡುತ್ತಾರೆ. ಇದನ್ನು ಬಿಟ್ಟು ಉತ್ತಮ ಪುಸ್ತಕಗಳನ್ನು ಖರೀದಿಸಿ ಓದಿ ಸಾಹಿತ್ಯ ಕ್ಷೇತ್ರದತ್ತ ಗಮನ ಹರಿಸಬೇಕೆಂಬ ಸಲಹೆ ಮಂಗಳೂರು ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಆಯಿಷಾರದ್ದಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ನಿನ ಸಂಚಾಲಕಿ ರುಕ್ಸಾನ ವಹಿಸಿದ್ದರು. ಸಬೀಹಾ ಫಾತಿಮಾ, ಫೌಝಿಯಾ, ಹರ್ಷಾದ್ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.