ಭಟ್ಕಳ, ಸೆ.28: ನಗರದಲ್ಲಿ ವಾಹನ ಸಂಚಾರ ಅವ್ಯವಸ್ಥೆಯಿಂದಾಗಿ ಸಮಸ್ಯೆ ಉದ್ಭವಿಸಿದ್ದು, ಸಮಸ್ಯೆ ಪರಿಹಾರಕ್ಕಾಗಿ ಏಕಮುಖ (ವನ್ ವೇ) ವಾಹನ ಸಂಚಾರ ಅಳವಡಿಕೆ ಕುರಿತು ಸಾರ್ವಜನಿಕರಲ್ಲಿ ಚರ್ಚಿಸಲು ಪೊಲೀಸ್ ಇಲಾಖೆಯ ವತಿಯಿಂದ ಸಾರ್ವಜನಿಕ ಸಭೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ನಡೆಯಿತು.

ನಗರದ ಮಾರಿಕಾಂಬೆ ಮಂದಿರದಿಂದ ಹೊವಿನ ಚೌಕದವರೆಗಿನ ರಸ್ತೆಯು ಅತ್ಯಂತ ವಾಹನ ನಿಬಿಡ ಪ್ರದೇಶವಾಗಿದ್ದು ಇಲ್ಲಿ ನಿತ್ಯವೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಇಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಏಕಮುಖ ಸಂಚಾರದ ನಿಯಮ ಅಳವಡಿಸುವುದೇ ಸುಲಭ ಮಾರ್ಗ ಎಂಬ ಪ್ರತಿಕ್ರಿಯೆ ಸಾರ್ವಜನಿ ಕರಿಂದ ವ್ಯಕ್ತವಾಯಿತು. ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ವನ್ನು ಸುಗಮಗೊಳಿಸಲು ಏಕಮುಖ ಸಂಚಾರ ವ್ಯವಸ್ಥೆ ಅಳವಡಿಸಿ ರಸ್ತೆಯ ಇಕ್ಕೆಲಗಳಲ್ಲಿ ದಿನಬಿಟ್ಟು ದಿನ ವಾಹನವನ್ನು ನಿಲುಗಡೆಗೊಳಿಸಲು ಅವಕಾಶ ಮಾಡಲಾಗುವುದು ಎಂದು ತಿಳಿಸಿದರು.
ಏಕಮುಖ ಸಂಚಾರ ವ್ಯವಸ್ಥೆಯಿಂದಾಗಿ ಭಟ್ಕಳದಿಂದ ಮುಂಡಳ್ಳಿಗೆ ಹೋಗುವ ಬಸ್ಸಿಗೆ ತೊಂದರೆಯಾಗುತ್ತದೆ. ಇದಕ್ಕೆ ರಿಯಾಯತಿ ನೀಡಬೇಕೆಂದು ಬಸ್ ಡಿಪೋ ವ್ಯವಸ್ಥಾಪಕರು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನಾಗರಿಕರು, ಕೆಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂದುಗಡೆ ಖಾಸಗಿ ಬಸ್ ಹಾಗೂ ಟೆಂಪೋಗಳ ಪೈಪೋಟಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಹದಗೆಟ್ಟ ಹೆದ್ದಾರಿ: ಸಾರ್ವಜನಿಕರ ಆಕ್ರೋಶ: ಇಲಿ ರಾ.ಹೆದ್ದಾರಿ ೧೭ ತುಂಬಾ ಹದಗೆಟ್ಟು ಹೋಗಿದ್ದು, ಹೊಂಡಗಳು ನಿರ್ಮಾಣವಾಗಿದೆ. ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರಿಗೆ ಅಪಾಯ ವುಂಟಾಗುವ ಸಾಧ್ಯತೆಯಿದ್ದು, ಕೂಡಲೇ ಕನಿಷ್ಠ ಹೆದ್ದಾರಿಯಲ್ಲಿರುವ ಹೊಂಡಗಳನ್ನಾದರೂ ಮುಚ್ಚುವ ಕೆಲಸ ಆರಂಭಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಹೆದ್ದಾರಿ ನಿಗವ್ಮದ ಎಂಜಿನಿಯರ್, ಹೆದ್ದಾರಿಗೆ ಡಾಮರು ಹಾಕಲು ಹಣ ಬಿಡುಗಡೆಯಾಗಿದ್ದು, ಮಳೆ ನಿಂತ ಬಳಿಕ ಕಾಮಗಾರಿ ಆರಂಭಿ ಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಹಾಯಕ ಕಮಿಷನರ್ ಡಾ.ಕೆ.ವಿ.ತ್ರಿಲೋಕಚಂದ್ರ, ತಾ.ಪಂ. ಅಧ್ಯಕೆ ಗೌರಿ ಮೊಗೆರ್, ಪುರಸಭೆಯ ಅಧ್ಯಕ್ಷ ಪರ್ವೇಝ್ ಕಾಸಿಂಜೀ, ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್, ವರ್ತಕ ಸಂಘದ ಅಧ್ಯಕ್ಷ ವೆಂಕಟೇಶ ಪ್ರಭು, ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಉದಯ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.