ಭಟ್ಕಳ, ನವೆಂಬರ್ ೨೧: ಶಿಲೆಕಲ್ಲು ಕ್ವಾರಿಗಳನ್ನು ನಿರ್ಬಂಧಿಸಿರುವ ಕ್ರಮವನ್ನು ವಿರೋಧಿಸಿದ ಇಲ್ಲಿನ ಗುತ್ತಿಗೆದಾರರ ಸಂಘ ಇಂದು ಬೆಳಿಗ್ಗೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಸಹಾಯಕ ಕಮೀಷನರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಕ್ವಾರಿ ಪುನರಾರಂಭಿಸಲು ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸುತ್ತಿರುವುದು
ಬೆಳಿಗ್ಗೆ ತಾಲೂಕಿನಲ್ಲಿ ಸರಕಾರದ ವತಿಯಿಂದ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ ಗುತ್ತಿಗೆದಾರರು ಶಿಲೆ ಕಲ್ಲು ಕ್ವಾರಿಗಳ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಿ ಕ್ವಾರಿ ಪುನರಾಂಭಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಭಟ್ಕಳ ತಾಲೂಕಿನಲ್ಲಿ ಸರಕಾರದ ವಿವಿಧ ಯೋಜನೆಯಡಿಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ಆದರೆ ಕಳೆದ ಕೆಲವು ತಿಂಗಳಿನಿಂದ ಅರಣ್ಯ ಇಲಾಖೆಯವರು
ಶಿಲೆ ಕಲ್ಲು ಕ್ವಾರಿಗಳನ್ನು ನಿರ್ಬಂಧಿಸಿರುವುದರಿಂದ ಕಾಮಗಾರಿಗಳಿಗೆ ಬೇಕಾದ ಕಚ್ಚಾವಸ್ತುಗಳ ಕೊರತೆ ಉಂಟಾಗಿದೆ. ಇದರಿಂದ ಸಾವಿರಾರು ಮಂದಿ ಕೂಲಿ ಕಾರ್ಮಿಕರ ಜೀವನಕ್ಕೆ ತೊಂದರೆಯಾಗುವುದರ ಜೊತೆಯಲ್ಲಿ ತಾಲೂಕಿನ ಅಭಿವೃದ್ದಿ ಕಾರ್ಯಗಳಿಗೂ ಹಿನ್ನೆಡೆಯಾಗಿದೆ. ಕಾಮಗಾರಿಗಳಿಗೆ ಜಲ್ಲಿ ತೀರಾ ಅವಶ್ಯಕತೆಯಿದ್ದು, ಇದರ ಅಲಭ್ಯತೆಯಿಂದಾಗಿ ಕಾಮಗಾರಿಯೇ ಸ್ಥಗಿತಗೊಂಡಿದೆ. ತಾಲೂಕಿನ ಅಭಿವೃದ್ದಿಯನ್ನು ಗಮನಿಸಿ ಶಿಲೆಕಲ್ಲುಗಳ ಕ್ವಾರಿಯ ಪುನರಾರಂಭಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ. ಸಹಾಯಕ ಕಮಿಷನರರ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿದ ಕಚೇರಿಯ ವ್ಯವಸ್ಥಾಪಕ ಎಂ ಬಿ ನಾಯ್ಕ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಈಶ್ವರ ನಾಯ್ಕ,ಕಾರ್ಯದರ್ಶಿ ಆಶ್ರಪ್, ಈರಪ್ಪ ಗರ್ಡಿಕರ, ಕೆ ಜೆ ದೇವಾಡಿಗ, ಬಾಬು ಮೊಗೇರ, ಮಂಜು ಗೊಂಡ, ಸುಬ್ರಾಯ ನಾಯ್ಕ, ವೆಂಕಟೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ಸುಭಾಸ ದೇವಾಡಿಗ,ಭಾಸ್ಕರ ನಾಯ್ಕ, ಸುನೀಲ ಬಿ ನಾಯ್ಕ ಶಿರಾಲಿ ಸೇರಿದಂತೆ ಹಲವಾರು ಗುತ್ತಿಗೆದಾರರು ಉಪಸ್ಥಿತರಿದ್ದರು.
ನಮ್ಮ ಪ್ರತಿನಿಧಿ ವರದಿ