ಬೆಂಗಳೂರು, ನ.17: ಭಿನ್ನಮತೀಯರು ಅಳತೆ ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳುವ ಶಕ್ತಿ ಬಿಜೆಪಿಗೆ ಇದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸದಾನಂದಗೌಡ ಹೇಳಿದ್ದಾರೆ.
ಕುದುರೆಯೂ ಅವರದೆ, ಮೈದಾನವೂ ಅವರದೆ ಹೇಗೇ ಬೇಕಾದರೂ ಓಡಿಸಬಹುದು. ಆದರೆ, ಬೇರೆಯವರ ಮೈದಾನಕ್ಕೆ ನುಗ್ಗಿದರೆ ಕಟ್ಟಿ ಹಾಕುವ ಶಕ್ತಿ ಬಿಜೆಪಿಗಿದೆ ಎಂದು ಸದಾನಂದಗೌಡ ರಾಜಭವನದಲ್ಲಿಂದು ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಭಿನ್ನಮತೀಯರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬಿಕ್ಕಟ್ಟಿನ ಸಂದರ್ಭದಲ್ಲಿ ದಿಲ್ಲಿಯಲ್ಲಿ ನಡೆದ ಮಾತಕತೆಯಲ್ಲಿ ನಡೆದಂತೆ ಎಲ್ಲ ಬೇಡಿಕೆಗಳು ಈಡೇರಿವೆ. ಇನ್ನು ಮುಂದೆ ಬಿಕ್ಕಟ್ಟು ಸೃಷ್ಟಿಯಾಗಲು ಅವಕಾಶವನ್ನೇ ನೀಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಸಂವಿಧಾನದಂತೆ ತಾವು ಮತ್ತೊಂದು ಅವಧಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ಎಲ್ಲರನ್ನು ಸಹಮತಕ್ಕೆ ತೆಗೆದುಕೊಂಡು ಒಮ್ಮತವಾಗಿ ಮುಂದಿನ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಇಲ್ಲವಾದರೆ ಚುನಾವಣೆ ಅನಿವಾರ್ಯವಾಗಬಹುದು ಎಂದು ಹೇಳಿದರು.
ಕೆಎಂಎಫ್ನ ಅಧ್ಯಕ್ಷರಾಗುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಾವೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ.
ತಮ್ಮ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ಸ್ಥಾನಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿದರು.