ಬೆಂಗಳೂರು : ಸ್ವಾಮಿ ನಿತ್ಯಾನಂದನ ರಾಸಲೀಲೆ ಪ್ರಕರಣವನ್ನು ತಮಿಳುನಾಡು ಸರಕಾರ ಕರ್ನಾಟಕಕ್ಕೆ ವರ್ಗಾಯಿಸಿದ್ದು, ನಿತ್ಯಾನಂದನ ಹಗರಣದ ಸಮಗ್ರ ತನಿಖೆ ನಡೆಸುವ ಸಲುವಾಗಿ ಪ್ರಕರಣನ್ನು ಸಿಐಡಿಗೆ ವಹಿಸಲು ಸರಕಾರ ಚಿಂತನೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಆರ್ ಇನ್ಫಂಟ್, ನಿತ್ಯಾನಂದನ ಪ್ರಕರಣವನ್ನು ತಮಿಳುನಾಡು ಸರಕಾರಕ್ಕೆ ರಾಜ್ಯಕ್ಕೆ ವರ್ಗಾಯಿಸಿದೆ. ನಿತ್ಯಾನಂದನ ಆಶ್ರಮ ನಿತ್ಯಾನಂದ ಧ್ಯಾನಪೀಠಮ್ ಬಿಡದಿಯಲ್ಲಿದೆ. ಬಿಡದಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿದ್ದು, ಸಂಬಂಧಪಟ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿತ್ಯಾನಂದನ ಹಗರಣದ ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸುವ ಚಿಂತನೆ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ವಿಡಿಯೋ: ಸ್ವಾಮಿ ನಿತ್ಯಾನಂದನ ಎರಡನೇ ಸಂದರ್ಶನ
ನಿತ್ಯಾನಂದನ ರಾಸಲೀಲೆ ಪ್ರಕರಣ ಬೆಳಕಿಗೆ ಬಂದ ನಂತರ ತಮಿಳುನಾಡು ಪೊಲೀಸ್ ಆತನ ವಿರುದ್ದ ಭಾರತೀಯ ದಂಡ ಸಂಹಿತೆಯ 295(ಎ), 420, 376, 377, 506(1) ಹಾಗೂ 120(ಬಿ) ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ನಿತ್ಯಾನಂದನ ಅನುಯಾಯಿಯಾಗಿದ್ದ ಲೆನಿನ್ ಕುರುಪ್ಪನ್ ಅಲಿಯಾಸ್ ಪ್ರೇಮಾನಂದನ ಹೇಳಿಕೆ ಆಧರಿಸಿ ಈ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ.