ಕಾರವಾರ, ಫೆಬ್ರವರಿ ೧೬: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಪ್ರಕ್ರಿಯೆಗೆ ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಕಾರ್ಯದಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ಹರಡಿರುವ ಜೀವನ ವ್ಯಸ್ತಗೊಳ್ಳಲಿದ್ದು ಪರಿಣಾಮವಾಗಿ ಹೊನ್ನಾವರ ಹಾಗೂ ಕುಮಟಾ ಪಟ್ಟಣಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ತೀರ ನಿಯಂತ್ರಣ ಮಿತಿಯನ್ನು ಉಬ್ಬರದ ಕಾರಣದಿಂದಾಗಿ ಐನೂರು ಮೀಟರುಗಳಿಗೆ ವಿಸ್ತರಿಸಿದ್ದು ಈ ಪ್ರದೇಶದಲ್ಲಿ ಜನರು ಹೊಸ ಕಟ್ಟಡ ಕಟ್ಟುವಂತಿಲ್ಲವಾದ್ದರಿಂದ ಜನರು ಹೋಗುವುದಾದರೂ ಎಲ್ಲಿಗೆ ಎಂದು ಪ್ರಶ್ನಿಸಿದರು. ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳನ್ನು ಸ್ಥಳೀಯರೊಂದಿಗೆ ನಿಷ್ಕರ್ಷಿಸುವುದು ಅಗತ್ಯ ಎಂದು ಅವರು ತಿಳಿಸಿದರು.
ಈಗಿರುವ ರಸ್ತೆ ಅಗಲೀಕರಣದ ಬದಲಾಗಿ ಜನನಿಬಿಡ ಸ್ಥಳಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ಶೀಘ್ರವೇ ಸಾರ್ವಜನಿಕ ಸಭೆಯನ್ನು ಕರೆಯುವುದಾಗಿ ಅವರು ಪ್ರಕಟಿಸಿದರು.