ಭಟ್ಕಳ, ಫೆಬ್ರವರಿ: 7 ಕ್ಷುಲ್ಲಕ ವಿಚಾರವಾಗಿ ಇಲ್ಲಿನ ಪಿಎಸ್ಐ ಉಮೇಶ್ ಕಾಂಬ್ಳೆ ಎಂಬುವವರು ರಿಕ್ಷ ಚಾಲಕರಿಗೆ ಥಳಿಸಿದ್ದಾರೆಂದು ಆರೋಪಿಸಿ ರಿಕ್ಷಾಚಾಲಕರು ಶನಿವಾರ ರಾತ್ರಿ ಸುಮಾರು ೧೧ಗಂಟೆಗೆ ಇಲ್ಲಿನ ಶಮ್ಸುದ್ದೀನ್ ವೃತ್ತದ ಬಳಿ ದಿಢೀರನೆ ಪ್ರತಿಭಟನೆಗಿಳಿದ ಘಟನೆ ಜರುಗಿದ್ದು ಪೋಲಿಸರ ಮತ್ತು ರಿಕ್ಷಾ ಚಾಲಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಇದು ನಗರದಲ್ಲಿ ಕೆಲ ಕಾಲ ಉದ್ವಿಗ್ನ ವಾತರವರಣವನ್ನು ನಿರ್ಮಿಸಿತು. ಬಂದರ್ ರಸ್ತೆಯಲ್ಲಿ ಯಾವುದೋ ಅಫಘಾತವೊಂದು ಜರುಗಿದ್ದು ಆ ಕುರಿತು ರಿಕ್ಷ ಚಾಲಕ ಶಮ್ಸುದ್ದೀನ್ ವೃತ್ತದ ಬಳಿ ಇತರ ರಿಕ್ಷ ಚಾಲಕರೊಂದಿಗೆ ಮಾತಿಗಿಳಿದಾಗ ನಗರ ಠಾಣೆಯ ಪಿ.ಎಸ್.ಐ ಉಮೇಶ್ ಎಂಬುವವರು ರಿಕ್ಷಚಾಲಕನಿಗೆ ಕಪಾಳ ಮೋಕ್ಷಗೈದರೆನ್ನಲಾಗಿದೆ. ಬಳಿಕ ಪಿಎಸ್ಐ ಉಮೇಶ್ ಕಾಂಬ್ಳೆ ಹಾಗೂ ಪಿಎಸೈ ಮಂಜುನಾಥ ಗೌಡರು ಇಬ್ಬರು ಚಾಲಕರನ್ನು ಠಾಣೆಗೆ ಕರೆದೊಯ್ದು ಬಂಧನದಲ್ಲಿರಿಸಿದರು.
ಈ ಪ್ರಕ್ರಿಯೆಯಿಂದ ಆಕ್ರೋಶಗೊಂಡ ಚಾಲಕರು ದಿಢೀರನೆ ಶಮ್ಸುದ್ದೀನ್ ವೃತ್ತ ಬಳಿ ಸೇರಿ ಪಿಎಸ್ಐ ವಿರುದ್ದ ಪ್ರತಿಭಟನೆಯನ್ನು ನಡೆಸಿದರು. ಸುದ್ದಿ ತಿಳಿದ ಸರ್ಕಲ್ ಇನ್ಸಪೆಕ್ಟರ್ ಗುರು ಮತ್ತೂರು ಆವರು ರಿಕ್ಷ ಚಾಲಕರನ್ನು ಸಮಾಧಾನ ಪಡಿಸಿ ಅವರನ್ನು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವಂತೆ ಮಾಡಿದ್ದಾರೆ. ರಿಕ್ಷಾ ಚಾಲಕರ ಪ್ರತಿನಿಧಿ ವೆಂಕಟೇಶ್ ನಾಯಕ್ ಮಾತನಾಡಿ ರಿಕ್ಷಾ ಚಾಲಕರ ಮೇಲೆ ಪೋಲೀಸರ ದಬ್ಬಾಳಿಕೆಯನ್ನು ಸರ್ವಥಾ ಸಹಿಸಲು ಸಾಧ್ಯವಿಲ್ಲ, ಒಂದು ವೇಲೆ ಚಾಲಕನಿಂದ ತಪ್ಪಾಗಿದ್ದಲ್ಲಿ ಆತನ ಮೇಲೆ ಕೇಸು ದಾಖಲಿಸಬಹುದಾಗಿತ್ತು, ಆದರೆ ಸಾರ್ವಜನಿಕವಾಗಿ ಚಾಲಕನಿಗೆ ಕಪಾಳಮೋಕ್ಷ ನೀಡುವುದು ಯಾವ ಕಾನೂನಿನಲ್ಲಿ ಬರೆದಿದೆ ಎಂದು ಪ್ರಶ್ನಿಸಿದರು.
ರಿಕ್ಷಾ ಚಾಲಕರ ಪ್ರತಿಭಟನೆಗೆ ಮಣಿದ ಪೀಎಸ್ ಐ ಕೂಡಲೇ ಬಂಧಿತ ಚಾಲಕರನ್ನು ಬಿಡುಗಡೆಗೊಳಿಸಿ ಶಮ್ಸುದ್ದೀನ್ ವೃತ್ತದ ಬಳಿ ತಂದು ಬಿಟ್ಟ ಬಳಿಕ ಚಾಲಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಆದರೆ ಇನ್ನು ಮುಂದೆ ಯಾವುದೇ ಚಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಉಗ್ರ ಕ್ರಮವನ್ನು ಎದುರಿಸಬೇಕಾಗಬಹುದು ಎಂದು ವೆಂಕಟೇಶ್ ನಾಯ್ಕ್ ಗುಡುಗಿದರು.
ಕ್ಷಮೆ ಯಾಚನೆಗೆ ಆಗ್ರಹ: ರಕ್ಷಾ ಚಾಲಕನಿಗೆ ಪಿ.ಎಸ್.ಐ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಕೂಡಲೆ ರಿಕ್ಷ ಚಾಲಕರಲ್ಲಿ ಕ್ಷಮೆಯನ್ನು ಯಾಚಿಸಬೇಕೆಂದು ರಿಕ್ಷಾ ಚಾಲಕರು ಆಗ್ರಹಪಡಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ.