ಭಟ್ಕಳ, ಡಿಸೆಂಬರ್ 9: ಇಲ್ಲಿನ ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕ್ ಕಟ್ಟಡದಲ್ಲಿರುವ ಹಾಫಿಝ್ಕಾ ಸಭಾಂಗಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ.ಡಿ.ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನೂರ ಆಹ್ಮದ್, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಡಿ.ಎಚ್.ಶಬ್ಬರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ,ಪಿಯುಸಿ, ಪದವಿ ಹಾಗೂ ಇಂಜಿನೀಯರಿಂಗ್ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿ ವಿಭಾಗದಲ್ಲಿ ಪ್ರಥಮ ದ್ವಿತಿಯಾ ಹಾಗೂ ತೃತೀಯ ಸ್ಥಾನವನ್ನು ಗಳಿಸಿದ ತಾಲೂಕಿನ ೧೨ ವಿದ್ಯಾರ್ಥಿಗಳಿಗೆ ಒಟ್ಟು ೨೫,೫೦೦ ರೂಗಳ ನಗದು ಬಹುಮಾನವನ್ನು ನೀಡಲಾಯಿತು.
ಬ್ಯಾಂಕಿನ ಅಧ್ಯಕ್ಷ ಡಾ.ಎಮ್. ಜಲಾಲುದ್ದೀನ್ ಪ್ರಸ್ಥಾವಿಕವಾಗಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ಎಸ್.ಎ.ರಝಾಖ್ ಸ್ವಾಗತಿಸಿದರು. ಮುಖ್ಯ ಶಾಖೆಯ ವ್ಯವಸ್ಥಾಪಕ ಸುಭಾಸ್ ಎಮ್.ಶೆಟ್ಟಿ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರದಾನ ವ್ಯವಸ್ಥಾಪಕ ವಿ.ಬಿ. ಭಟ್ಕಳಕರ್, ಬ್ಯಾಂಕಿನ ಉಪಾಧ್ಯಕ್ಷ ಅಬುಬಕರ್ ಕಾಸಿಮಜಿ, ನಿರ್ದೇಶಕ ಸೈಯ್ಯದ್ ಝೈನುಲ್ ಆಬಿದೀನ್, ಮುರುಡೇಶ್ವರ ಶಾಖೆಯ ವ್ಯವಸ್ಥಾಪಕ ಶಂಭು ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.