ಬೆಂಗಳೂರು, ಫೆಬ್ರವರಿ ೮ : ನೈಸ್ ಕಂಪನಿಗೆ ಹೆಚ್ಚುವರಿ ಭೂಮಿ ನೀಡಿಕೆಯ ವಿರುದ್ಧ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಷಯಕ್ಕೆ ರಾಜಕೀಯ ಲೇಪನ ಮಾಡುತ್ತಿರುವ ರಾಜ್ಯ ವಕೀಲ ಪರಿಷತ್ ಹಾಗೂ ಜೆಡಿಎಸ್ ಪ್ರಭಾವಿ ವಕೀಲರ ಗುಂಪಿನ ಕ್ರಮ ಇಡೀ ವಕೀಲ ವೃಂದಕ್ಕೆ ಮುಜುಗರ ಹಾಗೂ ಅಸಮಾದಾನವುಂಟು ಮಾಡಿದ ಘಟನೆ ಇಂದಿಲ್ಲಿ ಸಂಭವಿಸಿದೆ.
ಕಳೆದ ಗುರುವಾರದಂದು ಜೆಡಿಎಸ್ ವರಿಷ್ಠ ದೇವೇಗೌಡ ರಾಜ್ಯ ಸರ್ಕಾರಿ ಹಿರಿಯ ವಕೀಲರ ವಿರುದ್ಧ ಬಹಿರಂಗವಾಗಿ ಆಕ್ಷೇಪಹಾರ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಶನಿವಾರದಂದ್ದು ಬಿಜೆಪಿಯ ವಕೀಲ ಮೋರ್ಚ್ ಬಸವೇಶ್ವರ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸಿತ್ತು.
ರಾಜ್ಯ ವಕೀಲರ ಪರಿಷತ್ತು ನೆನ್ನೆ ತೆಗೆದುಕೊಂಡ ನಿರ್ಣಯದಂತೆ ಇಂದು ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಇಂದು ನ್ಯಾಯಾಲಯದ ಮುಂದೆ ಕೆಂಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರೆ ಜೆಡಿಎಸ್ ವಕೀಲ ಬಣವು ಪ್ರತಿಯಾಗಿ ಪ್ರತಿಭಟನೆ ನಡೆಸುವುದರ ಮೂಲಕ ಎರಡೂ ಗುಂಪುಗಳ ತಿಕ್ಕಾಟದಲ್ಲಿ ನ್ಯಾಯವಾದಿ ವೃತ್ತಿಮಾಡುವವರು ಇಕ್ಕಟಿನಲ್ಲಿ ಸಿಲುಕಿದಂತಾಯಿತು.
ದೇವೇಗೌಡರ ಬೆಂಬಲಿತ ವಕೀಲರು ರಾಜ್ಯ ವಕೀಲ ಪರಿಷತ್ತಿನ ಪದಾದಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅಡ್ವೋಕೇಟ್ ಜನರಲ್ ವಿರುದ್ಧ ಅವಹೇಳನ ಕಾರಿ ಟೀಕೆ ಮಾಡಿದ್ದಾರೆ ಎನ್ನಲಾದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ರಾಜ್ಯ ವಕೀಲ ಪರಿಷತ್ತಿನ ಪದಾಧಿಕಾರಿಗಳು ವಕೀಲರು ರಾಜ್ಯದ ಎಲ್ಲ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಕೆಂಪು ಬಾವುಟ ಧರಿಸಿ ಪ್ರತಿಭಟನೆ ನಡೆಸಿ ದೇವೇಗೌಡು ಕ್ಷಮೆಯಾಚಿಸಬೇಕೆಮದು ಆಗ್ರಹಿಸಿದರು.
ಹಿರಿಯ ರಾಜಕಾರಣಿಯಾಗಿರುವ ದೇವೇಗೌಡರು ತಮ್ಮ ಸ್ಥಾನಮಾನಕ್ಕೆ ಹೊಂದಿರುವವರ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.