ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಸಾಧನೆಯ ಹಾದಿಯಲ್ಲಿ ಗುರಿಮುಟ್ಟುವ ವರೆಗೆ ನಿಲ್ಲದಿರಿ: ಜಿಲ್ಲಾಧಿಕಾರಿ

ಕಾರವಾರ: ಸಾಧನೆಯ ಹಾದಿಯಲ್ಲಿ ಗುರಿಮುಟ್ಟುವ ವರೆಗೆ ನಿಲ್ಲದಿರಿ: ಜಿಲ್ಲಾಧಿಕಾರಿ

Sat, 13 Apr 2024 06:39:59  Office Staff   S O News

ಕಾರವಾರ:  ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವ ಗುರಿಗಳನ್ನು ಹೊಂದಬೇಕು ಹಾಗೂ ಆ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡೆ ತಡೆಗಳು ಬಂದರೂ ಎದೆಗುಂದದೇ , ತಮ್ಮ ನಿರೀಕ್ಷಿತ ಗುರಿ ತಲುಪುವವರೆಗೂ ಪ್ರಯತ್ನ ಮುಂದುವರೆಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಈ ಬಾರಿಯ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನ ಮತ್ತು ಸನ್ಮಾನ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿದೆ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಉತ್ತಮ ಅಂಕಗಳನ್ನು ಪಡೆದು ಉನ್ನತ ವಿದ್ಯಾಭ್ಯಾಸ ಪಡೆಯಬೇಕು. ಸಾಧನೆಯ ಗುರಿಯಡೆಗೆ ನಿರಂತರ ಪ್ರಯತ್ನಪಟ್ಟು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ನಾಗರೀಕ ಸೇವಾ ಪರೀಕ್ಷೆಗಳ ಮೂಲಕ ಉನ್ನತ ಅಧಿಕಾರಿಗಳಾಗಬೇಕು , ಯಾವುದೇ ಕಾರಣಕ್ಕೂ ತಮ್ಮ ಗುರಿಯಿಂದ ವಿಮುಖವಾಗಬಾರದು ಹಾಗೂ ಅದನ್ನು ತಲುಪುವ ವರೆಗೂ ವಿಶ್ರಮಿಸಬಾರದು ಎಂದರು.

ಜಿಲ್ಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸೇರಿದಂತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಕೌಟುಂಬಿಕ ಆರ್ಥಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಹಲವು ಯೋಜನೆಗಳ ಮೂಲಕ ಅಗತ್ಯ ನೆರವು ಒದಗಿಸಲು ಜಿಲ್ಲಾಡಳಿತದಿಂದ ಬದ್ದವಾಗಿದೆ ಎಂದರು.

ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ದ್ವಿತೀಯ ಪಿಯುಸಿ ಯಲ್ಲಿ ಕಳೆದ ಬಾರಿಗಿಂತ ಶೇಕಡಾವಾರು ಉತ್ತೀರ್ಣ ಪ್ರಮಾಣ ಅಧಿಕವಾಗಿದೆ, ಜಿಲ್ಲೆಯ ಈ ಫಲಿತಾಂಶಕ್ಕೆ ಕಾರಣವಾದ ವಿದ್ಯಾರ್ಥಿಗಳು, ಪೋಷಕರು ಮತ್ತು ಅಧ್ಯಾಪಕ ವೃಂದಕ್ಕೆ ಆಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಎಲ್ಲಾ ವಿದ್ಯಾರ್ಥಿಗಳು ತಮ್ಮ ಈ ಸಾಧನೆಯನ್ನು ಮುಂದಿನ ಶೈಕ್ಷಣಿಕ ಜೀವನದಲ್ಲಿ ಮುಂದುವರೆಸುವAತೆ ತಿಳಿಸಿದ ಜಿಲ್ಲಾಧಿಕಾರಿಗಳು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುವ ಯಾವುದೇ ರೀತಿಯ ಸೋಷಿಯಲ್ ಮೀಡಿಯಾಗಳು ಮತ್ತು ಮೊಬೈಲ್ ವ್ಯಸನಕ್ಕೆ ಒಳಗಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು. 

ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರೂ.10000, ದ್ವಿತೀಯ ಸ್ಥಾನ ಪಡೆದವರಿಗೆ ರೂ.5000 ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರೂ.2500 ಗಳ ನಗದು ಬಹುಮಾನ ವೈಯಕ್ತಿಕವಾಗಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಎಲ್ಲಾ ವಿದ್ಯಾರ್ಥಿಗಳನ್ನು ಫಲ ತಾಂಬೂಲ ಹಾಗೂ ಶಾಲು ಹೊದೆಸಿ ಸನ್ಮಾನಿಸಿದರು.

ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ , ಅಂಕಿತ ಸತೀಶ್ ಹೆಗ್ಡೆ, ದಿವ್ಯ ಎಸ್ ಗುಣೇಕರ್, ಝೈಬಾ ಎಂ ಮಿರ್ಚಿವಾಲೆ, ವಾಣಿಜ್ಯ  ವಿಭಾಗದ ಧ್ಯಾನ್ ರಾಮಚಂದ್ರ ಭಟ್, ಅಮಿತ್ ಎಂ ಹೆಗ್ಡೆ, ರಮ್ಯಾ  ಹೆಗ್ಡೆ, ವಿಜ್ಞಾನ ವಿಭಾಗದ ಸಿಂಚನ ಗಣಪತಿ ಹೆಗ್ಡೆ, ಶ್ರಾವ್ಯಾ ಶ್ರೀಧರ ಭಟ್, ಯಶಸ್ವಿನಿ ಎಸ್ ಹೆಗ್ಡೆ, ಸನ್ಮತಿ ಹೆಗ್ಡೆ ಅವರನ್ನು ಜಿಲ್ಲಾಧಿಕಾರಿಗಳು ನಗದು ಬಹುಮಾನ ನೀಡಿ ಸನ್ಮಾನಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ್ ನಾಯ್ಕ್ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತು ಕಾಲೇಜುಗಳ ಶಿಕ್ಷಕರು ಉಪಸ್ಥಿತರಿದ್ದರು.


Share: