ಎಸ್ಸೈ ಸಹಿ ದುರ್ಬಳಕೆ: ಪೊಲೀಸ್ ಕಾನ್ಸ್ಟೇಬಲ್ ಸೆರೆ
Sat, 01 May 2010 09:09:00
Office Staff
S.O. News Service
ಎಸ್ಸೈ ಸಹಿ ದುರ್ಬಳಕೆ: ಪೊಲೀಸ್ ಕಾನ್ಸ್ಟೇಬಲ್ ಸೆರೆ
ಮಂಗಳೂರು, ಎ.30: ಮಂಗಳೂರು ಗ್ರಾಮಾಂತರ ಠಾಣೆಯ ಎಸ್ಸೈ ಪ್ರಕಾಶ್ರ ಸಹಿಯನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಅದೇ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ರಾಜೇಶ್ ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.
ಬಂಧಿತ ಆರೋಪಿ ರಾಜೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿ ಬಾಯಿ ಎಂಬವರ ಪಾಸ್ಪೋರ್ಟ್ನ ಪರಿಶೀಲನೆಗಾಗಿ ಠಾಣೆಗೆ ಟಪ್ಪಾಲು ಬಂದಿತ್ತು. ಅದನ್ನು ರಾಬರ್ಟ್ ಎಂಬವರ ಅರ್ಜಿಯೊಂದಿಗೆ ಲಗತ್ತಿಸಿ ಪಾಸ್ಪೋರ್ಟ್ಗೆ ಸಂಬಂಧಿಸಿದ ಪತ್ರಗಳಿಗೆ ಆರೋಪಿ ರಾಜೇಶ್ ಎಸ್ಸೈ ಪ್ರಕಾಶ್ರ ನಕಲಿ ಸಹಿ ಬಳಸಿ ಪಾಸ್ಪೋರ್ಟ್ ಕಚೇರಿಗೆ ಕಳುಹಿಸಿದ್ದ ಎನ್ನಲಾಗಿದೆ. ಇದನ್ನು ಪತ್ತೆ ಹಚ್ಚಿದ ಪ್ರಕಾಶ್ ತಕ್ಷಣ ಕದ್ರಿ ಠಾಣೆಗೆ ದೂರು ನೀಡಿದರು.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯು ಕದ್ರಿ ಠಾಣೆಯ ಸರಹದ್ದಿನಲ್ಲಿದ್ದ ಕಾರಣ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರಗಿಸಿದರು. ಆರೋಪಿ ರಾಜೇಶ್ ಕಡಬ ಸಮೀಪದ ರಾಮಕುಂಜ ನಿವಾಸಿ ಎನ್ನಲಾಗಿದೆ.