ಕಾರವಾರ: ಪೊಲೀಸ್ ಇಲಾಖೆ ಹಾಗೂ ಎಲ್ಲ ಇಲಾಖೆಯವರಿಗೆ ಗೃಹರಕ್ಷಕ ದಳದವರು ತಮ್ಮ ಅಗತ್ಯ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಗೃಹ ರಕ್ಷಕ ದಳ ಕಾರವಾರದ ವತಿಯಿಂದ ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯ ಆವರಣದಲ್ಲಿ ಅಯೋಜಿಸಲಾದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಗೃಹ ರಕ್ಷಕ ದಳದವರು ತಮಗೆ ದೊರೆಯುವ ಅಲ್ಪ ವೇತನದಲ್ಲಿ ಸಮಾಜಕ್ಕೆ ತಮ್ಮ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದು, ಶಿಸ್ತು, ಬಂದೋಬಸ್ತ್ ಕಾಪಾಡುವಲ್ಲಿ ಪೊಲೀಸರಿಗಿಂತ ಹೆಚ್ಚಾಗಿ ಕರ್ತವ್ಯದಲ್ಲಿ ನಿರಂತರಾಗಿರುತ್ತಾರೆ ಎಂದರು.
ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯ ಸಮಾದೇಷ್ಠ ಡಾ. ಸಂಜು ತಿಮ್ಮಣ್ಣ ನಾಯಕ ಮಾತನಾಡಿ, ಗೃಹ ರಕ್ಷಕ ದಳವು ಶಾಂತಿ, ಶಿಸ್ತು ಮತ್ತು ಸುಭದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಎಲ್ಲರೂ ಒಗ್ಗೂಡಿ ಶ್ರದ್ಧೆ ನಿಷ್ಠೆ, ಪ್ರಾಮಾಣಿಕತೆಯ ಮನೋಭಾವ ಬೆಳಸಿಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಠಾಣಾಧಿಕಾರಿ, ಎಸ್ ಕೆ ನಾಯ್ಕ ಮಾತನಾಡಿ, ಗೃಹ ರಕ್ಷಕ ಸೇವೆಯು ಶಿಸ್ತು ಮತ್ತು ನಿಷ್ಕಾಮ ಸೇವೆಯಾಗಿದ್ದು, ಎಲ್ಲರೂ ಒಗ್ಗೂಡಿ ನಿಷ್ಕಲ್ಮಶÀ ಸೇವೆ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬೋಧಕ ರಘು ಬಿ.ಸಿ, ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಮಧು ಹೆಚ್, ಸಿಬ್ಬಂದಿ ಮಾಯಾ ಕಾಳೆ ಜಿಲ್ಲೆಯ ಎಲ್ಲಾ ತಾಲೂಕಿನ ಘಟಕಾಧಿಕಾರಿ, ಗೃಹರಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಮತ್ತು ಗೃಹರಕ್ಷಕಿಯರಿಗೆ, ಪ್ರಮಾಣಿಕತೆ ಮೆರೆದ ಮಂಗಳ ಜಟ್ಟಿ ಹಳ್ಯರ ಹಾಗೂ ನಿವೃತ್ತ ಘಟಕಾಧಿಕಾರಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಶಿರಸಿ ಹಾಗೂ ಹಳಿಯಾಳ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ ನೀಡಲಾಯಿತು.