ಕಾರವಾರ: ಹಿರಿಯ ನಾಗರಿಕರ ರಿಯಾಯಿತಿ ನೀಡದೇ ನಿರ್ವಾಹಕರು ಸೇವಾ ನ್ಯೂನತೆ ಎಸಗಿರುವ ಪ್ರಕರಣದಲ್ಲಿ ನಿರ್ವಾಹಕರಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿ, ಕಿರಿಯ ನೌಕರರ ಬಗ್ಗೆ ನಿರ್ಲಕ್ಷ್ಯ ತೋರಿದ ಎನ್ಡಬ್ಲೂಕೆಆರ್ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್ಗಳಿಗೆ 3ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ದಾಂಡೇಲಿಯ ದಾಮೋದರ ಎಂಬುವರು ತಮಗೆ ಹಿರಿಯ ನಾಗರಿಕರ ರಿಯಾಯಿತಿ ಟಿಕೇಟ್ ನೀಡಲಿಲ್ಲವೆಂದು ನಿರ್ವಾಹಕರು ಸೇರಿದಂತೆ ಎನ್ಡಬ್ಲ್ಯೂಕೆಆರ್ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್ ವಿರುದ್ಧ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ.ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ಆದೇಶ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮುಂಚೆ ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತು ತಮ್ಮ ಕೆಳಗಿನ ನೌಕರರ ಬಗೆಗೆ ನಿರ್ಲಕ್ಷ್ಯ ತೋರಿರುವುದನ್ನು ಗಮನಿಸಿದ ಆಯೋಗವು ಪ್ರಕರಣದ ನಿರ್ವಾಹಕರಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಅವರನ್ನು ಪ್ರಕರಣದಿಂದ ವಜಾಗೊಳಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್ಗಳ ವಿರುದ್ಧ ಆದೇಶಿಸಿ, ದೂರುದಾರರಿಗೆ ಸಿಗಬೇಕಾದ ಹಿರಿಯ ನಾಗರಿಕರ ರಿಯಾಯಿತಿಯ ಹತ್ತುಪಟ್ಟು ಮೊತ್ತ ಪಾವತಿಸುವುದರೊಂದಿಗೆ ಪ್ರಕರಣದ ಖರ್ಚು-ವೆಚ್ಚವಾಗಿ ರೂ.3ಸಾವಿರಗಳನ್ನು ಈ ಎಲ್ಲಾ ಅಧಿಕಾರಿಗಳು ಜಂಟಿಯಾಗಿ ಮತ್ತು ವೈಯಕ್ತಿಕವಾಗಿ ಪಾವತಿಸುವಂತೆ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.
ದೂರುದಾರರ ಪರ ನ್ಯಾಯವಾದಿ ದರ್ಶನ ವಿ. ಗೌಡ, ಎನ್ಡಬ್ಲೂಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್ಗಳ ಪರವಾಗಿ ವಕೀಲ ವಿ.ಎ.ತೋಡುರಕರ, ನಿರ್ವಾಹಕರ ಪರವಾಗಿ ವಕೀಲ ಪಿ.ಜಿ.ಪೋಳೆಕರ್ ವಕಾಲತ್ತು ನಡೆಸಿದ್ದರು. ,