ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹದು.ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವೊಂದರ ವಿಧಾನಸಭೆಯಲ್ಲಿ ರಾಷ್ಟ್ರ ಭಾಷೆ ಹಿಂದಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರೆಂಬ ಕಾರಣಕ್ಕಾಗಿ ಪ್ರಜಾಪ್ರತಿನಿಧಿಯೊಬ್ಬನಿಗೆ ವಿಧಾನ ಭವನದ ಒಳಗೆ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಹಲ್ಲೆ ನಡೆಸಿ ಕೊನೆಗೆ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕೆಲವು ದುಷ್ಟ ರಾಜಕೀಯ ಪಕ್ಷಗಳಿಂದಾಗಿ ನಮ್ಮ ದೇಶ ಯಾವ ರೀತಿಯ ಸಂಸ್ಕೃತಿಯೆಡೆಗೆ ವಾಲುತ್ತಿದೆ ಎಂಬುವುದನ್ನು ಸೂಚಿಸುತ್ತದೆ. ಈ ಘಟನೆ ಸಮಾಜವಾದಿ ಪಕ್ಷದ ಮುಖಂಡ ಶ್ರೀ ಅಬೂಹಾಶಿಂ ಆಜ್ಮಿ ಮೇಲೆ ನಡೆದ ಹಲ್ಲೆ ಅಲ್ಲ, ಇದು ರಾಷ್ಟ್ರವೊಂದರ ಸಂಸ್ಕೃತಿಯ ಮೇಲೆ, ಅಲ್ಲಿನ ಪ್ರಜಾಪ್ರಭುತ್ವದ ಮೇಲೆ ಅಲ್ಲಿನ ರಾಷ್ಟ್ರಭಾಷೆಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.
ಮೊನ್ನೆ ವಿಧಾನಸಭಾ ಅಧಿವೇಶನ ಆರಂಭವಾಗುವ ಮುನ್ನವೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಎಲ್ಲಾ ಶಾಸಕರೂ ಮರಾಠಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಇಲ್ಲದಿದ್ದರೆ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಥೇಟ್ ತಾಲಿಬಾನಿಗಳ ತರಹ ಎಚ್ಚರಿಕೆ ನೀಡಿದ್ದರು.ಅದರಂತೆ ಆಡಳಿತ ಪಕ್ಷ ಕಾಂಗ್ರೆಸ್ ಸೇರಿ ಇತರ ಎಲ್ಲಾ ಪಕ್ಷದ ಶಾಸಕರೂ ಮರಾಠಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ ಠಾಕ್ರೆಯ ಈ ಎಚ್ಚರಿಕೆಯನ್ನು ಮೊದಲೇ ಖಂಡಿಸಿದ್ದ ಮತ್ತು ಸಂವಿಧಾನಾತ್ಮಕವಲ್ಲದ ಶಕ್ತಿಗಳ ಬೆದರಿಕೆಗೆ ತಾನು ಜಗ್ಗುವುದಿಲ್ಲವೆಂದು ಘೋಷಿಸಿದ ಸಮಾಜವಾದಿ ಪಕ್ಷದ ಮುಖಂಡ ಅಬೂಹಾಶಿಂ ಆಜ್ಮಿ ಸಂವಿಧಾನಾತ್ಮಕವಾಗಿ ರಾಷ್ಟ್ರಭಾಷೆ ಹಿಂದಿಯಲ್ಲಿ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದ್ದರು. ಹೀಗಿದ್ದೂ ಅಲ್ಲಿನ ಸರ್ಕಾರ ವಿಧಾನಸಭೆಯ ಒಳಗೆ ಸೂಕ್ತ ಭದ್ರತಾ ಕ್ರಮಗಳನ್ನು ಏರ್ಪಡಿಸದೆ ಒಬ್ಬ ಜನಪ್ರತಿನಿಧಿಯೊಬ್ಬನ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸುವಂತಹ ಘಟನೆಗೆ ಪರೋಕ್ಷವಾಗಿ ಕಾರಣವಾಗುವುದರ ಜೊತೆಗೆ ದೇಶದ ಮಾನವನ್ನು ಬಹಿರಂಗವಾಗಿ ವಿಶ್ವದ ಮುಂದೆ ಕಳೆಯಲು ಕಾರಣವಾಯಿತು .ಒಬ್ಬ ಜನಪ್ರತಿನಿಧಿಯೊಬ್ಬನ ಮೇಲಿನ ಹಲ್ಲೆಯನ್ನು ಅದೂ ವಿಧಾನ ಸಭೆಯ ಒಳಗೆ ತಡೆಯಲಾಗದ ನೂತನ ಸರ್ಕಾರ ಮಹಾರಾಷ್ಟ್ರದ ಜನತೆಗೆ ಯಾವ ರೀತಿಯ ರಕ್ಷಣೆ ನೀಡಬಲ್ಲದು ಎಂಬ ಸಂಶಯವನ್ನೂ ಹುಟ್ಟುಹಾಕುವಂತೆ ಮಾಡಿತು.
ಇಲ್ಲಿ ಪ್ರಶ್ನೆ ಇರುವುದು ಭಾಷೆಯದ್ದಲ್ಲ ಮತಬ್ಯಾಂಕಿನದು. ಮರಾಠಿ ಜನಗಳ ಭಾಷಾಪ್ರೇಮವನ್ನು ದುರುಪಯೋಗಪಡಿಸಿಕೊಂಡು ಆಕ್ರಮಣಕಾರಿ ಹೇಳಿಕೆಗಳ ಮೂಲಕ ಮರಾಠಿ ಮತಬ್ಯಾಂಕ್ ಸೃಷ್ಟಿಸಿಕೊಂಡ ರಾಜ್ ಠಾಕ್ರೆ ಮರಾಠಿ ಜನರ ಮನಗೆಲ್ಲಲು ಮತ್ತೆ ಈ ರೀತಿಯ ನೀಚ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಅಖಂಡ ಭಾರತವನ್ನು ಭಾಷೆಯ ಹೆಸರಿನಲ್ಲಿ ಒಡೆಯುವ ರಾಷ್ಟ್ರದ್ರೋಹಿ ಕೆಲಸ ಎಂದೇ ಪರಿಗಣಿಸಬೇಕಾಗುತ್ತದೆ. ರಾಜ್ಯ ಮತ್ತು ಭಾಷೆಗಳಿಗಿಂತಲೂ ರಾಷ್ಟ್ರ ಮುಖ್ಯ .ನೆರೆಯಲ್ಲಿ ಚೀನಾ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳು ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುತಿದ್ದರೆ ಭಾರತೀಯರಾದ ನಾವು ಏಕತೆಯಿಂದ ಬಲಿಷ್ಠ ರಾಷ್ಟ್ರ ಕಟ್ಟುವ ಬದಲು ಭಾಷೆಯ ಹೆಸರಿನಲ್ಲಿ ಪರಸ್ಪರ ಜಗಳಕ್ಕೆ ನಿಂತರೆ ಇದರಿಂದ ರಾಷ್ಟಕ್ಕೆ ಅಪಾಯವೇ ಹೆಚ್ಚು.ಸೌಹಾರ್ದ ಭಾರತದ ಕಲ್ಪನೆಯೊಂದಿಗೆ ಸ್ವಾತಂತ್ಯ್ರ ತಂದುಕೊಟ್ಟ ಮಹನೀಯರು ಸುಗಮ ಆಡಳಿತಕ್ಕಾಗಿ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿದರು. ಅವರಲ್ಲಿ ಅಧಿಕಾರದ ವಿಕೇಂದ್ರೀಕರಣದ ಕಲ್ಪನೆ ಇತ್ತು.ಭಾರತದ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಈ ಮಾದರಿ ಉತ್ತಮವೆಂದೇ ಅವರು ಭಾವಿಸಿದ್ದರು. ಅದು ಸರಿ ಕೂಡಾ ಆಗಿತ್ತು. ಆದರೆ ರಾಜ್ ಠಾಕ್ರೆಯಂತಹ ಪುಂಡರು ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ರಾಷ್ಟ್ರವನ್ನು ಭಾಷೆಯ ಆಧಾರದ ಮೇಲೆ ವಿಭಜಿಸುತ್ತಿರುವುದು ಖಂಡನೀಯವಾಗಿದೆ.
ಇದುವರೆಗೆ ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆದು ತಮ್ಮ ಮತಬ್ಯಾಂಕ್ ಸೃಷ್ಠಿಸಿಕೊಳ್ಳುತಿದ್ದ ರಾಜಕಾರಣಿಗಳು ಈಗ ಭಾಷೆಯ