ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಐ.ಟಿ.ಎಫ್ ಕಲಬುರಗಿ ಓಪನ್-2023ಗೆ ತೆರೆ. ಕಲಬುರಗಿಯಲ್ಲಿ ಟೆನಿಸ್ ತರಬೇತಿ ಕೇಂದ್ರ ಸ್ಥಾಪಿಸಿ: ಪ್ರಿಯಾಂಕ್ ಖರ್ಗೆ

ಐ.ಟಿ.ಎಫ್ ಕಲಬುರಗಿ ಓಪನ್-2023ಗೆ ತೆರೆ. ಕಲಬುರಗಿಯಲ್ಲಿ ಟೆನಿಸ್ ತರಬೇತಿ ಕೇಂದ್ರ ಸ್ಥಾಪಿಸಿ: ಪ್ರಿಯಾಂಕ್ ಖರ್ಗೆ

Tue, 05 Dec 2023 03:12:17  Office Staff   SO News

ಕಲಬುರಗಿ :  ರಾಜ್ಯದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನಿಸ್ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯು ಕಲಬುರಗಿಯನ್ನು ಕೇಂದ್ರವಾಗಿಟ್ಟುಕೊಂಡು ಆಸಕ್ತ ಕ್ರೀಡಾಪಟುಗಳಿಗೆ ನಿರಂತರ ತರಬೇತಿ ನೀಡಲು ಪ್ರಾದೇಶಿಕ ತರಬೇತಿ ಕೇಂದ್ರ ತೆರೆಯಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಚಂಪಾ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ಓಪನ್ ಮೆನ್ಸ್ ಸಿಂಗಲ್ಸ್ ಫೈನಲ್ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,  ಸರ್ಕಾರ ಇದಕ್ಕಾಗಿ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ತರಬೇತಿ ಇಲ್ಲದೆ ಹೋದಲ್ಲಿ ಸ್ಥಳೀಯ ಪ್ರತಿಭೆಗಳು ಹೊರಬರಲು ಅಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಕಲಬುರಗಿಯಲ್ಲಿ ಐ.ಟಿ.ಎಫ್ ಟೂರ್ನಿ ಆಯೋಜನೆ ಇದಕ್ಕೆ ಸಾಕ್ಷಿ. ಕೆ.ಎಸ್.ಎಲ್.ಟಿ.ಗೆ ಇದು ಒಂದು ಟೂರ್ನಿಯಾದರೆ, ಕಲಬುರಗಿಗೆ 9 ಜನ ವಿದೇಶಿ ಆಟಗಾರರು ಭಾಗವಹಿಸಿ ಅಂತರಾಷ್ಟ್ರಿಯ ಪಂದ್ಯಾವಳಿ ಇದಾಗಿದೆ.
ಸುಮಾರು ಒಂದು ವಾರಗಳ ಟೆನಿಸ್ ಹಬ್ಬವನ್ನು ಇಲ್ಲಿನ ಜನರು ಕಣ್ತುಂಬಿಕೊಂಡಿದ್ದಾರೆ. ಇಂತಹ ಅಂತರಾಷ್ಟ್ರೀಯ, ರಾಷ್ಟ್ರಿಯ ಟೂರ್ನಿ ವರ್ಷದಲ್ಲಿ ಎರಡು ಮೂರು ಬಾರಿ ಇಲ್ಲಿ ಆಯೋಜಿಸಿದಲ್ಲಿ ಟೆನಿಸ್ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ‌. ಸ್ಥಳೀಯ ಕ್ರೀಡಾಪಟುಗಳು, ಬಾಲ್ ಬಾಯ್ಸ್ ಗಳಿಗೆ ವಿದೇಶಿ ಆಟಗಾರರನ್ನು ಸಮೀಪದಿಂದ ನೋಡುವ ಭಾಗ್ಯ ಸಿಕ್ಕಿದೆ. ಜಿದು ಅವರಲ್ಲಿ ಟೆನಿಸ್ ಪ್ರೀತಿ ಹೆಚ್ಚಿಸಲಿದೆ ಎಂದು ಕೆ.ಎಸ್.ಎಲ್.ಟಿ.ಎ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ ನೇತೃತ್ವಡ ಇಡೀ ಜಿಲ್ಲಾಡಳಿತ ತಂಡಕ್ಕೆ ಸಚಿವ‌ ಪ್ರಿಯಾಂಕ್ ಖರ್ಗೆ  ಅಭಿನಂದನೆ  ಸಲ್ಲಿಸಿದರು. ಇದಲ್ಲದೆ ಟೂರ್ನಿ ಅಯೋಜನೆಗೆ ಪ್ರಾಯೋಜಕತ್ವ ನೀಡಿದ ಉದ್ಯಮಿಗಳಿಗೆ, ಬಾಲ್ ಬಾಯ್ಸ್, ಅಂಪೈರ್, ಕ್ರೀಡಾಪಟುಗಳು, ಮಾಧ್ಯಮದವರಿಗೆ, ಪೈನಲ್ ಪಂದ್ಯದಲ್ಲಿ ಕಿರೀಟಕ್ಕೆ ಶ್ರಮಿಸಿದ ರಾಮಕುಮಾರ ರಾಮನಾಥನ ಮತ್ತು ಡೇವಿಡ್ ಪಿಚ್ಲರ್ ಹಾಗೂ ಫೈನಲ್ ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

33 ಕೋಟಿ ರೂ. ವೆಚ್ಚದಲ್ಲಿ ಚಂಪಾ  ಕ್ರೀಡಾಂಗಣ ಮೆಲ್ದರ್ಜೆಗೆ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನಿಸ್ ಕ್ರೀಡೆ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಉತ್ತೇಜನ ನೀಡಲು ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣಲ್ಲಿ ಟೆನಿಸ್ ಕ್ರೀಡಾಂಗಣವನ್ನು 33 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲು ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಇದಕ್ಕೆ 20 ಕೋಟಿ ರೂ. ಅನುದಾನ ಸಹ ಬಿಡುಗಡೆ ಮಾಡಲಾಗುವುದು. ಇದಲ್ಲದೆ ಚಂಪಾ ಕ್ರೀಡಾಂಗಣದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಜಾಗ ಸಹ  ಗುರುತಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಗೌರವ ಜಂಟಿ ಕಾರ್ಯದರ್ಶಿ ಸುನೀಲ ಯಜಮಾನಾ, ಐ.ಟಿ.ಎಫ್ ಸೂಪರ್‍ವೈಸರ್ ಧಾರಕಾ ಎಲ್ಲವಾಲಾ, ಟೂರ್ನಿ ನಿರ್ದೇಶಕ ಪೀಟರ್ ವಿಜಯಕುಮಾರ, ಅಪರ ಜಿಲ್ಲಾದಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 6-2; 6-1 ನೇರ ಸೆಟ್ ನಿಂದ ಅದ್ವಿತಿಯ ಗೆಲುವು ಸಾಧಿಸಿ ಸಿಂಗಲ್ಸ್ ಕಿರೀಟ ತನ್ನ‌ ಮುಡಿಗೇರಿಸಿದ ಭಾರತದ ರಾಮಕುಮಾರ ರಾಮನಾಥನ ಅವರಿಗೆ US $ 3600 ಚೆಕ್, ಟ್ರೋಫಿ ಮತ್ತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಅವರಿಗೆ  US $ 2120 ಚೆಕ್ ಮತ್ತು ಟ್ರೋಫಿ ಪ್ರದಾನ ಮಾಡಲಾಯಿತು.

ದೇಶಿಯ ಮಟ್ಟದಲ್ಲಿ ಕೆ.ಎಸ್.ಎಲ್.ಟಿ.ಎ. ಇಂತಹ ಟೂರ್ನಿ ಹೆಚ್ಚು ಆಯೋಜಿಸಿದಲ್ಲಿ ಉತ್ತಮ ಎ.ಟಿ.ಪಿ ರ‌್ಯಾಂಕ್ ಗಳಿಸಲು ಸಾಧ್ಯವಾಗಲಿದೆ


Share: