ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಅಪಾಯ ತಪ್ಪಿಸಲು ಸ್ಪಾರ‍್ಸ್ ನೇಮಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಅಪಾಯ ತಪ್ಪಿಸಲು ಸ್ಪಾರ‍್ಸ್ ನೇಮಕ

Tue, 06 Aug 2024 00:02:25  Office Staff   S O News

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸುವ ಭೂ ಕುಸಿತಗಳಿಂದಾಗುವ ಅಪಾಯಗಳನ್ನು ತಪ್ಪಿಸಿ, ಜನ ಮತ್ತು ಜಾನುವಾರುಗಳ ಜೀವಕ್ಕೆ ಅಪಾಯವಾಗದಂತೆ ಸಾಕಷ್ಟು ಮುಂಚಿತವಾಗಿ ಮುನ್ನೆಚರಿಕೆ ವಹಿಸುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ, ಭೂ ಕುಸಿತ ಪ್ರದೇಶಗಳನ್ನು ನಿಖರವಾಗಿ ಗುರುತಿಸಿ, ಭೂ ಕುಸಿತ ಸಂಭವಿಸುವುದರ ಬಗ್ಗೆ ಮುಂಚಿತವಾಗಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡುವ ವ್ಯಕ್ತಿಗಳನ್ನು ನಿಯೋಜಿಸಲು ಯೋಜನೆ ರೂಪಿಸಲಾಗಿದೆ.

ಭಾರತೀಯ ಭೂವಿಜ್ಞಾನ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ 439 ಅಪಾಯಕಾರಿ ಭೂಕುಸಿತ ಸ್ಥಳಗಳನ್ನು ಗುರುತಿಸಲಾಗಿದ್ದು, ರಾಜ್ಯ ಸರ್ಕಾರದಿಂದ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭೂಕುಸಿತವಾಗುವ ಸ್ಥಳಗಳನ್ನು ಗುರುತಿಸಿದ್ದು ಈ ಎರಡೂ ಗುರುತಿಸಲಾದ ಸ್ಥಳಗಳ ಪಟ್ಟಿಗಳನ್ನು ಸದ್ರಿ ಅಪಾಯಕಾರಿ ಭೂಕುಸಿತ ಸ್ಥಳಗಳಲ್ಲಿ ತಮ್ಮ ವ್ಯಾಪಿಯಲ್ಲಿ ಬರುವ ಸ್ಥಳಗಳಿಗೆ, ಸೂಕ್ತ ಗುರುತು ಮಾಡುವ ವ್ಯಕ್ತಿಗಳನ್ನು (Spotters) ಗಳನ್ನು ಆಯಾ ತಾಲೂಕುಗಳ ಹಂತದಲ್ಲಿ ನಿಯೋಜಿಸಿ, ಆ ಭೂ ಕುಸಿತ ಪ್ರದೇಶಗಳ ಮೇಲೆ ನಿಗಾ ವಹಿಸುವ ಕುರಿತಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಭಾರತೀಯ ಭೂವಿಜ್ಞಾನ ಇಲಾಖೆಯ ವರದಿಯಂತೆ, ಅಂಕೋಲಾ ತಾಲೂಕಿನಲ್ಲಿ 39, ಭಟ್ಕಳದಲ್ಲಿ 1, ಹಳಿಯಾಳದಲ್ಲಿ 13, ಹೊನ್ನಾವರದಲ್ಲಿ 92, ಜೋಯಿಡಾದಲ್ಲಿ 56, ಕಾರವಾರದಲ್ಲಿ 34, ಕುಮಟಾದಲ್ಲಿ 48, ಮುಂಡಗೋಡದಲ್ಲಿ 1, ಸಿದ್ದಾಪುರದಲ್ಲಿ 58, ಶಿರಸಿಯಲ್ಲಿ 59 ಹಾಗೂ ಯಲ್ಲಾಪುರದಲ್ಲಿ 38 ಸೇರಿದಂತೆ ಒಟ್ಟು 439 ಅಪಾಯಕಾರಿ ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ.

ಅಪಾಯಕಾರಿ ಭೂಕುಸಿತ ಸ್ಥಳಗಳ ಮೇಲೆ ನಿಗಾ ವಹಿಸಲು ನಿಯೋಜಿಸುವ ಗುರುತು ಮಾಡುವ ವ್ಯಕ್ತಿಗಳಿಗೆ ಭಾರತೀಯ ಭೂ ವಿಜ್ಞಾನ ಇಲಾಖೆಯಿಂದ (GSI) ತರಬೇತಿಯನ್ನು ನೀಡಲಾಗುವುದು. ಸದ್ರಿ ಗುರುತು ಮಾಡುವ ವ್ಯಕ್ತಿಗಳು ಪ್ರತಿನಿತ್ಯ ಅಂತಹ ಸ್ಥಳವನ್ನು ಪರಿಶೀಲಿಸಿದ ಬಗ್ಗೆ ಅಲ್ಲಿನ ಸ್ಥಿತಿಗತಿಗಳ ಅವಲೋಕನ ಮಾಡಿ ಕಚೇರಿಗೆ ವರದಿಯನ್ನು ಸಲ್ಲಿಸಬೇಕಾಗಿದೆ.

ಪ್ರಸ್ತುತ ಗುರುತಿಸಲಾಗಿರುವ ಭೂ ಕುಸಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಗುರುತು ಮಾಡುವ ವ್ಯಕ್ತಿಗಳನ್ನಾಗಿ ನೇಮಿಸಲು ಉದ್ದೇಶಿಸಲಾಗಿದ್ದು, ಇವರಿಂದ ಭೂ ಕುಸಿತದ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ಹಾಗೂ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.


Share: