ಮಂಗಳೂರು,ಫೆ.4:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44,276 ಬಿಪಿಎಲ್ ಕುಟುಂಬಗಳಿಗೆ,ಜಿಲ್ಲೆಯ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದ ಬಿಪಿಎಲ್ ಕುಟುಂಬದ ಐವರು ಸದಸ್ಯರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ 30,000ರೂ.ಗಳವರೆಗೆ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಮಾರ್ಚ್ ಒಂದರಿಂದ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.
ಬಿಪಿಎಲ್ ಪಟ್ಟಿಯಿಂದ ಕೈಬಿಟ್ಟು ಹೋದ ಬಡ ಕುಟುಂಬಗಳು ವಾರ್ಷಿಕ 450 ರೂ. ಪಾವತಿಸಿ ಫ್ಯಾಮಿಲಿ ಕಾರ್ಡ್ ಪಡೆದು ಕೊಳ್ಳುವ ಬಗ್ಗೆ ವಿಮಾ ಕಂಪೆನಿ ಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದರು. ಕೇಂದ್ರ ಸರ್ಕಾರ ಶೇ.75 ರಷ್ಟು ಮತ್ತು ರಾಜ್ಯ ಸರ್ಕಾರ ಶೇ.25 ರಷ್ಟು ವೆಚ್ಚ ಭರಿಸುತ್ತಿದ್ದು, ಯೋಜನೆಯನ್ನು ಆನ್ ಲೈನ್ ಮೂಲಕ ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು. ವಿಮಾ ಕಂಪೆನಿಯಾದ ಮೆ.ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಆಯ್ಕೆ ಮಾಡಿದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯಬಹುದಾಗಿದ್ದು, ವೆನ್ ಲಾಕ್ ಆಸ್ಪತ್ರೆ ಸೇರಿದಂತೆ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲೂ ಫಲಾನುಭವಿಗಳಿಗಾಗಿ ಪ್ರತ್ಯೇಕ ಸೌಲಭ್ಯ ಒದಗಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಮಟ್ಟದ ಆರ್ ಎಸ್ ಬಿ ವೈ ಅನುಷ್ಙಾನ ಸಮಿತಿ ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಅಧ್ಯಕ್ಷರು ಮತ್ತು ಸಹಾಯಕ ಕಾರ್ಮಿಕ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಆರ್ ಎಸ್ ಬಿ ವೈ ನ ಜಿಲ್ಲಾ ಕಿಯೋಸ್ಕ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಕರ್ನಾಟಕ ಬಿಲ್ಡಿಂಗ್ ಬೆಂದೂರವೆಲ್, ಕಂಕನಾಡಿ ದೂ.ಸಂ. 0824- 2437479 ಇಲ್ಲಿ ಸಂಪರ್ಕಿಸಬಹುದು. ಟೋಲ್ ಫೀ ನಂ. 1800-425-9778 ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಟಿಯಲ್ಲಿ ಹೆಚ್ಚುವರಿ ಕಾರ್ಮಿಕ ಆಯುಕ್ತ ಮತ್ತು ಆರ್ ಎಸ್ ಬಿ ವೈ ನ ಸಿಇಒ ಎಸ್.ನರಸಿಂಹಯ್ಯ, ಎನ್ ಐಸಿಯ ರೀಜನಲ್ ಮ್ಯಾನೇಜರ್ ಜಾರ್ಜ್, ಆರ್ ಎಸ್ ಬಿ ವೈ ನ ನೋಡಲ್ ಅಧಿಕಾರಿ ಅಪ್ಪಯ್ಯ ಶಿಂದಿಹಟ್ಟಿ ಉಪಸ್ಥಿತರಿದ್ದರು.