ಮಿಡ್ನಾಪುರ (ಬಂಗಾಳ), ಅ.27: ನಕ್ಸಲೀಯರ ದುಷ್ಕೃತ್ಯದ ಸರಣಿ ಮುಂದುವರೆದಿದೆ. ಜಾರ್ಖಂಡ್ನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶಿರಚ್ಛೇದ, ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ಗಳ ಅಪಹರಣದ ಬಳಿಕ ನಕ್ಸಲೀಯರು ಮಂಗಳವಾರ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಭುವನೇಶ್ವರದಿಂದ ದೆಹಲಿಗೆ ಹೊರಟಿದ್ದ ‘ರಾಜಧಾನಿ ಎಕ್ಸ್ ಪ್ರೆಸ್’ ರೈಲನ್ನೇ ಐದು ತಾಸು ಒತ್ತೆಯಾಗಿ ಇರಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಮತ್ತೊಂದು ಸವಾಲೆಸೆದಿದ್ದಾರೆ.
ಆದರೆ ಅದೃಷ್ಟವಶಾತ್ ಸಂಜೆ ವೇಳೆಗೆ ಈ ಪ್ರಕರಣ ಸುಖಾಂತ್ಯಗೊಂಡಿದ್ದು, ಕೇಂದ್ರೀಯ ಸೇನಾ ಪಡೆಗಳು ಆಗಮಿಸುತ್ತಿರುವುದನ್ನು ನೋಡಿದ ನಕ್ಸಲೀಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಜತೆಗೆ ತಾವು ಒತ್ತೆಯಾಗಿ ಇರಿಸಿಕೊಂಡಿದ್ದ ರೈಲು ಹಾಗೂ ರೈಲು ಚಾಲಕರನ್ನೂ ಬಿಡುಗಡೆ ಮಾಡಿದ್ದಾರೆ. ಘಟನೆಯಿಂದ ಆಘಾತಗೊಂಡಿರುವ ಎಲ್ಲ ೪೭೫ ಪ್ರಯಾಣಿಕರೂ ಸುರಕ್ಷಿತವಾಗಿದ್ದು, ಅವರನ್ನು ದೆಹಲಿಗೆ ಕಳಿಸಲು ವ್ಯವಸ್ಥೆ ಮಾಡಲಾಗಿದೆ.
ನಕ್ಸಲರ ಬೆಂಬಲಿತ ‘ಪೊಲೀಸ್ ದೌರ್ಜನ್ಯ ವಿರೋಧಿ ಜನತಾ ಸಮಿತಿ’ (ಪಿಸಿಎಪಿಎ) ಸಂಘಟನೆಯ ೪೦೦ ಕಾರ್ಯಕರ್ತರು, ಬಂಧಿತನಾಗಿರುವ ತಮ್ಮ ನಾಯಕ ಛತ್ರಧರ್ ಮಹಾತೋನನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇರಿಸಿ ಈ ಕೃತ್ಯ ಎಸಗಿದ್ದಾರೆ.
ಬುಡಕಟ್ಟು ಜನರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಈ ಭಾಗದಲ್ಲಿ ಮಂಗಳವಾರದಿಂದ ಈ ಸಂಘಟನೆ ೪೮ ಗಂಟೆ ಬಂದ್ಗೆ ಕರೆ ನೀಡಿತ್ತು. ಬಂದ್ ಸಂದರ್ಭದಲ್ಲೇ ರೈಲು ಹೈಜಾಕ್ ಘಟನೆ ನಡೆದಿದೆ.
ಆಗಿದ್ದೇನು?: ಬೆಳಗ್ಗೆ ೯.೩೦ಕ್ಕೆ ಭುವನೇಶ್ವರವನ್ನು ಬಿಟ್ಟ ರೈಲು ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಖರಗ್ಪುರ ತಲುಪಿತು. ಖರಗ್ಪುರ ಬಿಟ್ಟು ಅರ್ಧ ಗಂಟೆ ಬಳಿಕ ರೈಲು ದಟ್ಟಾರಣ್ಯದಿಂದ ಆವೃತವಾಗಿರುವ ಬನಸ್ಥಳ ರೈಲು ನಿಲ್ದಾಣದ ಬಳಿ ಸಾಗುತ್ತಿತ್ತು. ಅಲ್ಲಿ ಹಳಿಗೆ ಅಡ್ಡಲಾಗಿ ನಕ್ಸಲರು ಮರದ ಬೊಡ್ಡೆಯೊಂದನ್ನು ಅಡ್ಡಲಾಗಿ ಇರಿಸಿದ್ದರು.
ಇದನ್ನು ದೂರದಿಂದಲೇ ಗಮನಿಸಿದ ಚಾಲಕರಾದ ಕೆ. ಆನಂದರಾವ್ ಮತ್ತು ಕೆ.ಜೆ. ರಾವ್ ರೈಲನ್ನು ನಿಲ್ಲಿಸಿದರು. ರೈಲು ನಿಂತಿದ್ದೇ ತಡ, ಪಕ್ಕದ ಅಡವಿಗಳಲ್ಲಿ ಅವಿತಿದ್ದ ಸುಮಾರು ೪೦೦ ನಕ್ಸಲ್ ಪರ ಕಾರ್ಯಕರ್ತರು ರೈಲಿನ ಮೇಲೆರಗಿ ಇಬ್ಬರೂ ಚಾಲಕರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ‘ನಾವು ಹೇಳುವವರೆಗೂ ರೈಲು ಚಲಾಯಿಸಬೇಡಿ’ ಎಂದು ಚಾಲಕರನ್ನು ಬೆದರಿಸಿದರು.
ಖಡ್ಗ, ಬಿಲ್ಲು-ಬಾಣ, ಕೊಡಲಿ, ಬಂದೂಕು, ಕೆಂಪು ಧ್ವಜಗಳನ್ನು ಹಿಡಿದಿದ್ದ ನಕ್ಸಲರು ಒತ್ತಾಯಪೂರ್ವಕವಾಗಿ ರೈಲಿನ ಬಾಗಿಲುಗಳನ್ನು ತೆರೆಸಿ ಪ್ರಯಾಣಿಕರನ್ನೆಲ್ಲ ಕೆಳಗಿಳಿಸಿದರು. ಪ್ರಯಾಣಿಕರ ಮೇಲೆ ಯಾವುದೇ ಹಲ್ಲೆ ನಡೆಸಲಿಲ್ಲವಾದರೂ, ಸಿಟ್ಟಿನ ಭರದಲ್ಲಿ ರೈಲಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದರು. ರೈಲಿನ ಮೇಲೆ ಮಾವೋವಾದಿ ಘೋಷಣೆಗಳನ್ನು ಬರೆದರು.
ನಂತರ ತಮ್ಮ ನಾಯಕ ಛತ್ರಧರ್ ಮಹಾತೋನನ್ನು ಬಿಡುಗಡೆ ಮಾಡಬೇಕು. ಬಂಗಾಳದವರೇ ಆದ ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಮಾತುಕತೆಗೆ ಕಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದರು. ಅಲ್ಲದೆ, ತಮ್ಮ ವಿರುದ್ಧ ಕಾರ್ಯಾಚರಣೆಗೆ ಭದ್ರತಾ ಪಡೆಗಳನ್ನು ಕಳಿಸಕೂಡದು ಎಂದೂ ಎಚ್ಚರಿಸಿದರು. ಆದರೆ, ಇದಕ್ಕೆ ಬಗ್ಗದ ಕೇಂದ್ರ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಿ ಕೇಂದ್ರೀಯ ಪಡೆಗಳನ್ನು ಸ್ಥಳಕ್ಕೆ ರವಾನಿಸಿತು. ರಾತ್ರಿ ೭.೩೦ರ ಸುಮಾರಿಗೆ ಕೇಂದ್ರೀಯ ಪಡೆಗಳು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡ ನಕ್ಸಲರು ಒತ್ತೆಯಾಳಾಗಿರಿಸಿಕೊಂಡಿದ್ದ ಚಾಲಕರು ಮತ್ತು ರೈಲನ್ನು ಬಿಟ್ಟು ಪರಾರಿಯಾದರು. ಈ ವೇಳೆ ಸ್ವಲ್ಪ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಚಾಲಕ ಗಾಯಗೊಂಡಿದ್ದಾನೆ. ನಂತರ ಸ್ಥಳಕ್ಕೆ ಆಗಮಿಸಿದ ಪ್ರತ್ಯೇಕ ‘ಪರಿಹಾರ ರೈಲು’, ಆತಂಕಗೊಂಡಿದ್ದ ಪ್ರಯಾಣಿಕರನ್ನು ಉಪಚರಿಸಿತಲ್ಲದೆ ಮುಂದಿನ ಯಾನಕ್ಕೆ ಅವಕಾಶ ಮಾಡಿಕೊಟ್ಟಿತು.
ಕೃತ್ಯಕ್ಕೆ ಕಿಶನ್ಜಿ ಬೆಂಬಲ: ಬಂಗಾಳ, ಜಾರ್ಖಂಡ್, ಒರಿಸ್ಸಾದಲ್ಲಿ ನಡೆಯುತ್ತಿರುವ ನಕ್ಸಲೀಯ ದುಷ್ಕೃತ್ಯಗಳ ರೂವಾರಿಯಾಗಿರುವ ನಕ್ಸಲ್ ನಾಯಕ ಕಿಶನ್ಜಿ ಅಲಿಯಾಸ್ ಕೋಟೇಶ್ವರರಾವ್, ‘ನಕ್ಸಲೀಯರು ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ, ರೈಲು ಅಪಹರಣ ಮತ್ತು ಮಿಡ್ನಾಪುರ ಭಾಗದಲ್ಲಿ ನಡೆಯುತ್ತಿರುವ ಬಂದ್ನಲ್ಲಿ ಭಾಗಿಯಾಗಿರುವ ಪೊಲೀಸ್ ದೌರ್ಜನ್ಯ ವಿರೋಧಿ ಸಮಿತಿ ಕಾರ್ಯಕರ್ತರಿಗೆ ನಮ್ಮ ಬೆಂಬಲವಿದೆ’ ಎಂದು ಕೆಲ ಟೀವಿ ವಾಹಿನಿಗಳಿಗೆ ತಿಳಿಸಿದ್ದಾನೆ. ‘ನಮ್ಮ ನಾಯಕ ಛತ್ರಧರ್ ಮಹಾತೋನನ್ನು ವಿನಾಕಾರಣ ಬಂಧಿಸಲಾಗಿದೆ. ಆತನ ಬಿಡುಗಡೆ ಸೇರಿ ಸರ್ಕಾರಕ್ಕೆ ನಮ್ಮ ೨೨ ಬೇಡಿಕೆಗಳಿವೆ’ ಎಂದು ಆತ ತಿಳಿಸಿದ್ದಾನೆ.
ವಜಾಕ್ಕೆ ಆಗ್ರಹ: ಪ.ಬಂಗಾಳದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ನಕ್ಸಲ್ ಸಮಸ್ಯೆ ಎದುರಿಸಲು ಎಡರಂಗ ಸರ್ಕಾರ ವಿಫಲವಾಗಿದೆ. ಕೂಡಲೇ ಆ ಸರ್ಕಾರ ವಜಾ ಮಾಡಿ ಎಂದು ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಇದೇ ವೇಳೆ, ಪ್ರತಿಭಟನಾನಿರತ ನಕ್ಸಲ್ ಪರ ಕಾರ್ಯಕರ್ತರ ಜತೆ ಮಾತುಕತೆಗೆ ಸಿದ್ಧ ಎಂದೂ ಅವರು ಘೋಷಿಸಿದ್ದಾರೆ.
ಸೌಜನ್ಯ: ಕನ್ನಡಪ್ರಭ